ಬೆಂಗಳೂರು: `ಬ್ಲೂ ಫಿಲಂ~ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ನೀಡಿದ್ದ ನೋಟಿಸ್ಗೆ ಉತ್ತರ ನೀಡಲು ಇನ್ನೂ ಒಂದು ವಾರ ಸಮಯಾವಕಾಶ ನೀಡುವಂತೆ ಮೂವರು ಶಾಸಕರೂ ಸಭಾಧ್ಯಕ್ಷರನ್ನು ಕೋರಿದ್ದಾರೆ.
ಇದೇ 7ರಂದು ವಿಧಾನಸಭೆಯಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಕಾರಣಕ್ಕೆ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ್ ಹಾಗೂ ಈ ಮೊಬೈಲ್ ಫೋನ್ ಕೊಟ್ಟರೆನ್ನಲಾದ ಕೃಷ್ಣ ಪಾಲೆಮಾರ್ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು. ಈ ಪ್ರಕರಣ ಕುರಿತು ಸೋಮವಾರ ಬೆಳಿಗ್ಗೆ 10.30ರೊಳಗೆ ಉತ್ತರ ನೀಡುವಂತೆ ಸಭಾಧ್ಯಕ್ಷರು ನೋಟಿಸ್ ನೀಡಿದ್ದರು.
ಈ ಗಡುವಿನ ಒಳಗೇ ಅಂದರೆ ಸೋಮವಾರ ಬೆಳಿಗ್ಗೆ 9ಗಂಟೆಗೇ ಮೂವರು ಮಾಜಿ ಸಚಿವರ ಆಪ್ತ ಸಿಬ್ಬಂದಿ ನೋಟಿಸ್ಗೆ ಉತ್ತರ ನೀಡಲು ಒಂದು ವಾರ ಕಾಲಾವಕಾಶ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿರುವ ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಅವರು `ಕಾಲಾವಕಾಶ ನೀಡುವ ಅಧಿಕಾರ ಇರುವುದು ಸಭಾಧ್ಯಕ್ಷರಿಗೆ. ಹೀಗಾಗಿ ಶಾಸಕರ ಮನವಿ ಪತ್ರದ ವಿವರಗಳನ್ನು ಸಭಾಧ್ಯಕ್ಷರಿಗೆ ತಿಳಿಸಲಾಗುವುದು~ ಎಂದರು.
ಸಭಾಧ್ಯಕ್ಷ ಬೋಪಯ್ಯ ಅವರು ಬೆಂಗಳೂರಿನಲ್ಲಿ ಇಲ್ಲ. ಅವರು ಮಂಗಳವಾರ ನಗರಕ್ಕೆ ಬರುವ ಸಾಧ್ಯತೆ ಇದ್ದು, ನಂತರವೇ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.