ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರೊಂದಿಗೆ ಚಕಮಕಿ: ಅಧಿಕಾರಿಗೆ ಅರ್ಧಚಂದ್ರ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೀದರ್‌: ಭಾಲ್ಕಿ ತಾಲ್ಲೂಕಿನ ಹಾಲ­ಹಳ್ಳಿಯಲ್ಲಿರುವ ಕಾರಂಜಾ ಯೋಜನೆ­­ಯ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಶಾಸಕರೊಂದಿಗೆ ಮಾತಿನ ಚಕಮಕಿ ನಡೆಸಿದ ಅಧಿಕಾರಿ­ಯನ್ನು ಸಭೆಯಿಂದ ಹೊರ ಕಳುಹಿಸಿದ ಪ್ರಸಂಗ ನಡೆಯಿತು.

ಶಾಸಕ ಈಶ್ವರ ಖಂಡ್ರೆ ‘ವಿಶೇಷ ಭೂಸ್ವಾಧೀನಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೆಲಸ ಮಾಡು­ವುದಾ­ದರೆ ಇರಬೇಕು. ಇಲ್ಲವಾದರೆ ಹೋಗ­ಬೇಕು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಭೂ ಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ, ‘ತುಂಬಿದ ಸಭೆಯಲ್ಲಿ ಆಧಾರವೇ ಇಲ್ಲದೇ ಆರೋಪ ಮಾಡುವುದು ಸರಿ­ಯಲ್ಲ. ನನ್ನಿಂದ ಏನಾದರೂ ತಪ್ಪಿದ್ದರೆ ನಿರ್ದಿಷ್ಟವಾಗಿ ಹೇಳಿ. ಅದಕ್ಕೆ ಕ್ರಮ ಕೈಗೊಳ್ಳಲಿ. ಸುಮ್ಮನೆ ಆರೋಪ ಮಾಡಬೇಡಿ’ ಎಂದು ತಕರಾರು ತೆಗೆದರು.

ಶಾಸಕ ಈಶ್ವರ ಖಂಡ್ರೆ , ‘ಷಟ್‌ ಅಪ್‌’ ಎಂದ ಏರು ದನಿಯಲ್ಲಿ ಪ್ರತಿಕ್ರಿಯಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವೆ ಉಮಾಶ್ರೀ ಹಾಗೂ ಸಂಸದ ಧರ್ಮಸಿಂಗ್‌ ಅವರೂ ಅಧಿಕಾರಿ­ಯನ್ನು ತರಾಟೆಗೆ ತೆಗೆದುಕೊಂಡರು.

ಧರ್ಮಸಿಂಗ್‌ ಎದ್ದು ನಿಂತು ಅಧಿ­ಕಾರಿ­ಯತ್ತ ಕೈತೋರಿಸುತ್ತಾ, ‘ಹೇಯ್‌.. ಏನು ಮಾತಾಡ್ತಿಯೋ. ಸುಮ್ಮನೇ ಕೂಡು’ ಎಂದು ಸೂಚಿ­ಸಿದರೆ, ಉಮಾಶ್ರೀ ಅವರು,‘ಸುಮ್ಮನೇ ಕೂರಿ. ಜನಪ್ರತಿನಿಧಿ ಉದ್ದೇಶಿಸಿ ಹೀಗೇ ಮಾತನಾಡುವುದು ಸರಿಯಲ್ಲ. ಶಾಸಕರು ನಿಮ್ಮ ವಿರುದ್ಧ ಆರೋಪ ಮಾಡಿಲ್ಲ. ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರತ್ತ ತಿರುಗಿದ ಸಚಿವೆ ಉಮಾಶ್ರೀ, ‘ಡಿಸಿಯವರೇ ಇದು ಸರಿಯಾದ ಕ್ರಮ­ವಲ್ಲ. ನಾನು ನಿರ್ದೇಶನ ನೀಡು­ತ್ತಿ­ದ್ದೇನೆ. ಇವರ ವಿರುದ್ಧ ಕ್ರಮ ಜರುಗಿಸಿ. ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿ­ಗಳು ಹೀಗೆ ಮಾತ­ನಾಡು­ವುದು ಸರಿ­ಯಲ್ಲ. ಅವರ ಮೇಲಾ­-ಧಿಕಾರಿಗಳಿಗೆ ಅಧಿ­ಕಾರಿಯ ವರ್ತನೆ ಕುರಿತು ಪತ್ರ ಬರೆಯಿರಿ. ಏನು ಉತ್ತರ ಕೊಡು­ತ್ತಾರೋ ಅವರಲ್ಲಿಯೇ ಕೊಡಲಿ’ ಎಂದು ಉಮಾಶ್ರೀ ಸೂಚಿಸಿದರು.

ಅಧಿಕಾರಿಯ ವಿರುದ್ಧ ಅಸ­ಮಾ­ಧಾನ ವ್ಯಕ್ತಪಡಿಸಿದ ಶಾಸಕ ಈಶ್ವರ ಖಂಡ್ರೆ ‘ಅಧಿಕಾರಿಯನ್ನು ಸಭೆಯಿಂದ ಹೊರಗೆ ಕಳುಹಿಸಬೇಕು’ ಎಂದು ಆಗ್ರ­ಹಿಸಿದರು. ಉಮಾಶ್ರೀ ಇದಕ್ಕೆ ಸ್ಪಂದಿಸಿ, ಸಭೆಯಿಂದ ಹೊರ ನಡೆಯುವಂತೆ ಅಧಿಕಾರಿಗೆ ಸೂಚಿಸಿದರು.

ಕಾರ್ಯಕರ್ತರ ದಬ್ಬಾಳಿಕೆ:  ಸಭೆ­ಯಿಂದ ಹೊರಬಂದ ಅಧಿಕಾರಿ ಮಲ್ಲಿ­ಕಾರ್ಜುನ ತಮ್ಮನ್ನು ಭೇಟಿ­ಯಾದ ಸುದ್ದಿಗಾರರೊಂದಿಗೆ ಮಾತ­ನಾಡಿ, ‘ನಾನು ಈ ಸ್ಥಾನಕ್ಕೆ ಬಂದು ನಾಲ್ಕು ತಿಂಗಳಷ್ಟೇ ಆಗಿದೆ. ನನ್ನಿಂದ ಏನು ಲೋಪವಾಗಿದೆ ? ತಪ್ಪಾಗಿದ್ದರೆ ಕ್ರಮ ಜರುಗಿಸಲಿ’ ಎಂದು ಹೇಳಿದರು.

ಶಾಸಕರ ಬೆಂಬಲಿಗರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಂದು ಕೆಲ ಮಾಹಿತಿ ಕೇಳಿದರು. ಕಾನೂನು ಮಿತಿಯಲ್ಲಿ ನಾನು ನೀಡಿದ್ದು, ಇದನ್ನು ಶಾಸಕರ ಗಮನ­ಕ್ಕೂ ತಂದಿದ್ದೇನೆ. ಅವರ ಮಾತು­ಗಳಿಗೆ ಸ್ಪಂದಿಸಿಲ್ಲ ಎಂದು ಆರೋಪ ಮಾಡು­ತ್ತಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಕ್ರಮ ಜರುಗಿಸಲಿ. ಉತ್ತರ ನೀಡುತ್ತೇನೆ ಎಂದು ಹೇಳಿದರು. ಸುಮಾರು 20 ನಿಮಿಷ ಮಾತಿನ ಚಕಮಕಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT