ಮೂಡುಬಿದಿರೆ: ಆಳ್ವಾಸ್ ವಿಶ್ವ ವಿರಾಸತ್ ಕಾರ್ಯಕ್ರಮದ ಉದ್ಘಾಟನಾ ದಿನ ನಡೆದ ‘ನಾದ ಲೋಕ’ ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ವಯಲಿನ್, ಕೊಳಲು ವಾದನವನ್ನು ಸಮ್ಮಿಲನಗೊಳಿಸಿದ ಹೊಚ್ಚ ಹೊಸ ಪ್ರಯತ್ನ ನಡೆಯಿತು.
ವಯಲಿನ್ನಲ್ಲಿ ಡಾ. ಮೈಸೂರು ಮಂಜುನಾಥ್ ಕೊಳಲಿನಲ್ಲಿ ವಿದ್ವಾನ್ ಪ್ರವೀಣ್ ಗೋಡ್ಖಿಂಡಿ ಹಾಗೂ ಯಕ್ಷಗಾನ ಭಾಗವತಿಕೆಯಲ್ಲಿ ಪದ್ಯಾಣ ಗಣಪತಿ ಭಟ್ ಈ ಹೊಸ ಪ್ರಯತ್ನಕ್ಕೆ ಮುಂದಾದರು. ವಯಲಿನ್ –ಕೊಳಲು ವಾದನದೊಂದಿಗೆ ಸಾಂಪ್ರದಾಯಿಕವಾಗಿ ಆದಿತಾಳದಲ್ಲಿ ಶುರುವಾದ ಕಛೆೇರಿ ಹಂಸಧ್ವನಿ ರಾಗದೊಂದಿಗೆ ಆರಂಭವಾಯಿತು. ಬಳಿಕ ಕೀರವಾಣಿ ರಾಗವನ್ನು ಕೈಗೆತ್ತಿಕೊಂಡ ಸಂಗೀತ ದಿಗ್ಗಜರಿಬ್ಬರೂ ರಾಗ ವಿಸ್ತಾರದೊಂದಿಗೆ ತಮ್ಮ ಪ್ರಸ್ತುತಿಯನ್ನು ಮುಗಿಸುತ್ತಿದ್ದಂತೆಯೇ ಪದ್ಯಾಣ ಗಣಪತಿ ಭಟ್ ಯಕ್ಷಗಾನದ ಮಟ್ಟುಗಳೊಂದಿಗೆ ಸಜ್ಜಾಗಿದ್ದರು.
ಶ್ರೀ ಗುರುಗಣಾಧಿಪತೆಯೇ ಎನ್ನುತ್ತಾ ಅವರು ಹೊರಳಿದ್ದು “ಸಖಿಯರೆಲ್ಲ ಬನ್ನಿ ವನಕೆ ಪೋಗುವ/ ಸಕಲರೆಲ್ಲ ಕೂಡಿ ವನದ ಅಂದ ಚಂದವಾ...ಎನ್ನುವ ಹಾಡಿಗೆ. ವಯಲಿನ್ ಮತ್ತು ಬಾನ್ಸುರಿ, ಭಾಗವತರ ಜಾಗಟೆ ದನಿಯ ಜಾಡನ್ನು ಹಿಡಿದು ಮೋಹನ ರಾಗದ ವಿಸ್ತಾರದ ಸಾಧ್ಯತೆಗಳನ್ನು ಅನ್ವೇಷಿಸುತ್ತಾ ಸಾಗಿದರು.
ಯಾವುದೇ ಪೂರ್ವ ತಯಾರಿ ಇಲ್ಲದೆಯೇ ನಡೆಸಿದ ಈ ನಾದ ಸಮ್ಮಿಲವನ್ನು ಪ್ರೇಕ್ಷಕರೂ ಕುತೂಹಲದಿಂದ ಆಸ್ವಾದಿಸಿದರು. ಅಪ್ಪಟ ಯಕ್ಷ ಪ್ರಿಯರು ಸ್ವೀಕರಿಸುವುದಕ್ಕೆ ಕೊಂಚ ಹೊತ್ತು ಹಿಂದೇಟು ಹಾಕಿದರೂ ಸಭೆಯಲ್ಲಿ ಸಂಗೀತಪ್ರಿಯರೇ ಪ್ರಧಾನವಾಗಿದ್ದರಿಂದ ಪ್ರಸ್ತುತಿ ಮುಗಿಯುವ ವೇಳೆಗೆ ಚಪ್ಪಾಳೆಯ ಸುರಿಮಳೆ ಬಿತ್ತು. ಮೃದಂಗದಲ್ಲಿ ವಿದ್ವಾನ್ ಅರ್ಜುನ್ ಕುಮಾರ್, ತವಿಲ್ನಲ್ಲಿ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ, ಖಂಜೀರದಲ್ಲಿ ವಿದ್ವಾನ್ ಅಮೃತ, ಡ್ರಮ್್ಸನಲ್ಲಿ ವಿದ್ವಾನ್ ಅರುಣ್ ಕುಮಾರ್, ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಚೆಂಡೆಯಲ್ಲಿ ದೇವಾನಂದ ಭಟ್ ಸಹಕರಿಸಿದರು. ನಾದಲೋಕದ ಬಳಿಕ ಕೋಲ್ಕತ್ತದ ಉಪಾಸನ ಸೆಂಟರ್ ಫಾರ್ ಡಾನ್ಸ್ ವತಿಯಿಂದ ‘ಪರಿಕ್ರಮ ಎ ಜರ್ನಿ’ - ಕಥಕ್ ಪ್ರದರ್ಶನ ನಡೆಯಿತು.