ಮುಂಬೈ (ಪಿಟಿಐ): ಆದರ್ಶ ಸೊಸೈಟಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಕೇಂದ್ರಿಯ ತನಿಖಾ ದಳ (ಸಿಬಿಐ) ಗುರುವಾರ 'ಕ್ಲೀನ್ ಚಿಟ್' ನೀಡಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವೇಳೆ ಶಿಂಧೆ ಅವರು ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಬಾಂಬೆ ಹೈಕೋರ್ಟ್ಗೆ ಸಿಬಿಐ ತಿಳಿಸಿದೆ.
ದಕ್ಷಿಣ ಮುಂಬೈನಲ್ಲಿರುವ 31 ಅಂತಸ್ತಿನ ಆದರ್ಶ ಕಟ್ಟಡದಲ್ಲಿ ಬೇನಾಮಿ ಹೆಸರಲ್ಲಿ `ಫ್ಲಾಟ್' ಹೊಂದಿರುವ ಆರೋಪ ಎದುರಿಸುತ್ತಿರುವ ಶಿಂಧೆ ಅವರನ್ನೂ ಪ್ರಕರಣದಲ್ಲಿ ಆರೋಪಿಯಾಗಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ವಾಟೆಗಾಂವ್ಕರ್, ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಸಿಬಿಐ ಹೀಗೆ ಹೇಳಿದೆ.
`ನಾವು ನಡೆಸುತ್ತಿರುವ ತನಿಖೆಯಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರನ್ನು ಆರೋಪಿಯಾಗಿ ಸೇರಿಸುವುದು ಕಾನೂನು ಬದ್ಧವಾಗಿ ಅಗತ್ಯವಿಲ್ಲ' ಎಂದು ಅಫಿಡೆವಿಟ್ನಲ್ಲಿ ಸಿಬಿಐ ಹೇಳಿದೆ.