ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಕ ದಾರಿ ತಪ್ಪಿದರೆ ಸಮಾಜಕ್ಕೆ ಕಳಂಕ'

Last Updated 6 ಸೆಪ್ಟೆಂಬರ್ 2013, 8:43 IST
ಅಕ್ಷರ ಗಾತ್ರ

ಕೆ.ಆರ್.ನಗರ: ಸಮಾಜದಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾದದ್ದು. ಈ ಸ್ಥಾನಕ್ಕೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಶಾಸಕ ಸಾ.ರಾ. ಮಹೇಶ್  ಸಲಹೆ ನೀಡಿದರು.

ಇಲ್ಲಿಯ ಪುರಸಭೆ ಬಯಲು ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಗುರುವಿನ ಸ್ಥಾನದಲ್ಲಿರುವವರು ದಾರಿ ತಪ್ಪಿದರೆ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಕ್ಷಕಿಯರಿಬ್ಬರು ಮತದಾನ ಮಾಡಲು ರೂ 500 ಕೇಳಿದರು ಎಂಬ ಸಂಗತಿ ಕೇಳಿ ಮನಸ್ಸಿಗೆ ನೋವಾಗಿದೆ. ಇಂತಹ ಪದ್ಧತಿ ಒಳ್ಳೆಯದಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಮಾತನಾಡಿ, ಬಿಸಿಯೂಟ ಜವಾಬ್ದಾರಿಯಿಂದ ಶಿಕ್ಷಕರನ್ನು ಮುಕ್ತಗೊಳಿಸಿ ತರಗತಿಗೊಂದು ಕೊಠಡಿ, ಒಬ್ಬರು ಶಿಕ್ಷಕರು ಎಂಬ ಕ್ರಮ ಅನುಸರಿಸಿದರೆ ಸರ್ಕಾರಿ ಕನ್ನಡ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಬಹುದು ಎಂದರು.

ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ರವಿ, ನಿವೃತ್ತ ಪ್ರಾಂಶುಪಾಲ ಮೇದೂರು ಮಹೇಶಾರಾಧ್ಯ, ನಿವೃತ್ತ ಉಪನ್ಯಾಸಕರಾದ ಕೆ.ಆರ್. ಲಕ್ಕೇಗೌಡ, ಎಸ್.ಆರ್. ರಾಮೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಲ್ಪನಾ ಧನಂಜಯ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಕುಂತಲಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯದುಗಿರೀಶ್, ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ, ಡಾ.ಬಿ.ಸಿ. ದೊಡ್ಡೇಗೌಡ, ಡಿ.ಎನ್. ರವಿಪ್ರಸನ್ನ, ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಪಿ. ಮಧುರದಾಸ್, ವಿಜಯ್‌ಕುಮಾರ್, ಎ. ಕುಚೇಲ ಇತರರು ಇದ್ದರು.

ಬಹಿಷ್ಕಾರ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಸಂಘಟಕರು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸದೇ ಅವಮಾನ ಮಾಡಿದ್ದಾರೆ ಎಂದು ಕಳೆದ ಬಾರಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾಗೇಶ್ ಗುರುವಾರ ಆರೋಪಿಸಿದ್ದಾರೆ.

ಸೌಜನ್ಯಕ್ಕೆ ಆಹ್ವಾನ ಪತ್ರಿಕೆಯನ್ನೂ ನೀಡಿಲ್ಲ. ಇದರಿಂದ ನನಗೆ ಬೇಸರವಾಗಿದ್ದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿದ್ದೇನೆ ಎಂದರು.
ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ: ರವೀಂದ್ರಕುಮಾರ್

ಹುಣಸೂರು: ಶಿಕ್ಷಕರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವುದರಿಂದ ಭವಿಷ್ಯದ ಪ್ರಜೆಗಳಿಗೆ ಉತ್ತಮ   ಬುನಾದಿ ಹಾಕಲು ಸಾಧ್ಯ ಎಂದು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಜಿ.ಕೆ. ರವೀಂದ್ರಕುಮಾರ್ ಅಭಿಪ್ರಾಯಪಟ್ಟರು. 

ಶಿಕ್ಷಕರ ಭವನದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಭವಿಷ್ಯದ ಪ್ರಜೆಗಳಿಗೆ ದೇಸಿ  ಸಂಸ್ಕೃತಿ ಮತ್ತು ಪರಂಪರೆಯನ್ನು ತಲುಪಿಸುವಲ್ಲಿ ಶಿಕ್ಷಕರು ಮಹತ್ತರ ಜವಾಬ್ದಾರಿ ಹೊರಬೇಕಿದೆ ಎಂದರು. 

ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಮಾತನಾಡಿದರು. ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರು, ಪ್ರತಿಭಾವಂತ ಮಕ್ಕಳು, ಕ್ರೀಡಾ ಚಟುವಟಿಕೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಟಿ. ರಾಜಣ್ಣ, ರಮೇಶ್, ಡಾ.ಪುಷ್ಪಾ ಅಮರನಾಥ್, ದೇವರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೇವಕಿ ತಿಮ್ಮನಾಯಕ,  ಉಪಾಧ್ಯಕ್ಷ ಮಹದೇವ್ ಮಾತನಾಡಿದರು.

`ರಾಧಾಕೃಷ್ಣನ್ ಆದರ್ಶ ಶಿಕ್ಷಕರಿಗೆ ಮಾದರಿಯಾಗಲಿ'
ಪಿರಿಯಾಪಟ್ಟಣ: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿಗೆ ದೊಡ್ಡ ಸ್ಥಾನವಿದ್ದು, ರಾಧಾಕೃಷ್ಣನ್ ಅವರ ಆದರ್ಶ ಎಲ್ಲ ಶಿಕ್ಷಕರಿಗೂ ಮಾದರಿಯಾಗಬೇಕು ಎಂದು ಉಪನ್ಯಾಸಕಿ ತೇಜೋವತಿ ತಿಳಿಸಿದರು.

ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಯ ಪಾಲನೆ, ಶಿಸ್ತು, ಸನ್ನಡತೆ ಹಾಗೂ ಜ್ಞಾನ ಸಂಪಾದನೆ ಆದರ್ಶ ಶಿಕ್ಷಕನ ಗುಣಲಕ್ಷಣಗಳಾಗಿವೆ. ಇಂದಿನ ವಿದ್ಯಾರ್ಥಿಗಳು ವಿದ್ಯೆಯ ಜತೆ ವಿನಯತೆಯನ್ನು ಮೈಗೂಡಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ಶಾಸಕ ಕೆ. ವೆಂಕಟೇಶ್ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದು, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಸೌಲಭ್ಯದಲ್ಲಿ ಕಡಿಮೆಯಿಲ್ಲ ಎಂದರು. ರತ್ನಮ್ಮ, ಕೆ. ಜಯಶಂಕರ್, ಎಸ್.ಎಸ್. ಬಸಪ್ಪ, ಎಸ್.ಇ. ಕೃಷ್ಣೇಗೌಡ, ಪುಟ್ಟರಾಜ್, ರಾಘವೇಂದ್ರಸ್ವಾಮಿ ಸೇರಿದಂತೆ 15 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶೇ 100ರಷ್ಟು  ಫಲಿತಾಂಶ ಪಡೆದ ಪ್ರೌಢಶಾಲೆಗಳನ್ನು ಪುರಸ್ಕರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕಾವೇರಿ ಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಿ.ವಿ. ಅನಿತಾ, ಯೋಗೇಶ್, ರಘುನಾಥ್, ಪ್ರಕಾಶ್, ಸಾಕಮ್ಮ, ಆರ್.ಸಿ. ಚಂದ್ರು, ಎಪಿಎಂಸಿ ಅಧ್ಯಕ್ಷ ಕೆ. ಹೊಲದಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ. ಪ್ರಕಾಶ್, ರೋಟರಿ ಅಧ್ಯಕ್ಷ ಪಿ.ಎಸ್. ಹರೀಶ್, ಬಿಇಒ ಎಸ್. ರಾಮಲಿಂಗು, ಪ್ರಭಾರ ಇಒ ಮನೋಹರ್, ಬಿಆರ್‌ಸಿ ರೇವಣ್ಣ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT