ನಾಗಮಂಗಲ: ನೋಟ್ ಪುಸ್ತಕ ತಂದಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ 15 ವಿದ್ಯಾರ್ಥಿಗಳನ್ನು ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ ಘಟನೆ ಪಟ್ಟಣದ ಕೊಟೆಬೆಟ್ಟದ ರಸ್ತೆಯಲ್ಲಿರುವ ನವೋದಯ ನ್ಯಾಷನಲ್ ಐಟಿಐ ಕಾಲೇಜಿನಲ್ಲಿ ಬುಧವಾರ ನಡೆದಿದೆ.
ಪ್ರಥಮ ವರ್ಷದ ಫಿಟ್ಟರ್ ವಿಭಾಗದ ವಿದ್ಯಾರ್ಥಿಗಳಾದ ಯೋಗೇಶ್, ಮಹದೇವ, ಉಮಾಶಂಕರ್, ಎನ್.ಜೆ. ನಾಗರಾಜು, ಭರತಕೀರ್ತಿ, ಸೀತಾರಾಮು, ಗಿರಿವರ್ಧನ್, ರವಿಕಿರಣ್, ಮಂಜು, ವಿ.ಕೆ. ಚೇತನ್, ಸಚ್ಚಿನ್ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು. ಕಸಬಾ ಹೋಬಳಿ ಸಂಕನಹಳ್ಳಿ ಗ್ರಾಮದ ನಾಗೇಶ್ ಎಂಬ ಐಟಿಐ ಕಾಲೇಜು ಶಿಕ್ಷಕನೇ ತಮ್ಮನ್ನು ಥಳಿಸಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಹೋಮ್ವರ್ಕ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಶಿಕ್ಷಕ ವಯರ್ನಿಂದ ಬೆನ್ನು, ಕೈ, ಕಾಲು, ಭುಜ ಎಲ್ಲೆಂದರಲ್ಲಿ ಬಲವಾಗಿ ಹೊಡೆದಿದ್ದಾನೆ. ಹೊಡೆತ ತಿಂದ ಎಲ್ಲ ವಿದ್ಯಾರ್ಥಿಗಳೂ ರಕ್ತ ಹೆಪ್ಪುಗಟ್ಟಿ ಹಿಂಸೆ ಅನುಭವಿಸಿದ್ದಾರೆ. ಕೆಲ ವಿದ್ಯಾರ್ಥಿಗಳ ಬೆನ್ನಿಗೆ ರಕ್ತವೂ ಬಂದಿದೆ.
ಸುದ್ದಿ ತಿಳಿದ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು, ಎಬಿವಿಪಿ ಕಾರ್ಯಕರ್ತರು ನವೋದಯ ಐಟಿಐ ಕಾಲೇಜಿನ ಬಳಿ ಜಮಾಯಿಸಿ ಶಿಕ್ಷಕ ನಾಗೇಶ್ ವರ್ತನೆಯನ್ನು ಖಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ಲಿಂಗರಾಜು, ಕಾಲೇಜಿನಲ್ಲಿ ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲಾಗುವುದು. ಹಲ್ಲೆ ನಡೆಸಿರುವ ಶಿಕ್ಷಕ ನಾಗೇಶ್ ಅವರನ್ನು ತಕ್ಷಣದಿಂದಲೇ ಸೇವೆಯಿಂದ ಅಮಾನತ್ತುಗೊಳಿಸಲಾಗುವುದು ಎಂದು ಭರವಸೆ ನೀಡಿದರು.