ಬೆಂಗಳೂರು: ಸ್ವಇಚ್ಛೆಯಿಂದ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಗೊಳ್ಳುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಅವರು ಸೇವೆಗೆ ಸೇರಿದ ದಿನಾಂಕವನ್ನು ಆಧರಿಸಿ 10 ವರ್ಷದ ಕಾಲಮಿತಿ ಬಡ್ತಿ, 15 ವರ್ಷದ ಸ್ವಯಂ ಚಾಲಿತ ಬಡ್ತಿ ಮತ್ತು 20 ವರ್ಷದ ಮುಂಬಡ್ತಿ ನೀಡುವ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.ಆದರೆ ಇದನ್ನು ಜೇಷ್ಠತೆಗೆ ಪರಿಗಣಿಸುವುದಿಲ್ಲ. ಈ ಸೌಲಭ್ಯವು ವೈಯಕ್ತಿಕವಾಗಿರುವುದರಿಂದ ಆ ಜೇಷ್ಠತಾ ಘಟಕದ ಹಿರಿಯ ನೌಕರರು ವೇತನ ಏರಿಕೆಗೆ ಅರ್ಹರಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೊಳ್ಳುವ ಶಿಕ್ಷಕರಿಗೆ ಅವರು ಸೇವೆಗೆ ಸೇರಿದ ದಿನಾಂಕವನ್ನು ಆಧರಿಸಿ 10 ವರ್ಷದ ಕಾಲಮಿತಿ ಬಡ್ತಿ, 15 ವರ್ಷದ ಸ್ವಯಂ ಚಾಲಿತ ಬಡ್ತಿ ಮತ್ತು 20 ವರ್ಷದ ಮುಂಬಡ್ತಿ ನೀಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಕೇಳಿಬಂದಿತ್ತು. ಇದಕ್ಕೆ ಮನ್ನಣೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಪ್ರಧಾನ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.