ಮಲೇಬೆನ್ನೂರು: ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಮೇಲೆ ಹದ್ದಿನ ಕಣ್ಣಿಡುವಂತೆ ಮುಖ್ಯ ಶಿಕ್ಷಕರಿಗೆ ಶಾಸಕ ಬಿ.ಪಿ. ಹರೀಶ್ ಸಲಹೆ ನೀಡಿದರು.
ಸಮೀಪದ ಕುಂಬಳೂರಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಸಮಸ್ಯೆ ಕುರಿತು ಶಿಕ್ಷಕರೊಂದಿಗೆ ಅವರು ಚರ್ಚೆ ನಡೆಸಿದರು.
ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದರೊಂದಿಗೆ, ಮಕ್ಕಳ ಶೈಕ್ಷಣಿಕ ಇತರೆ ಚಟುವಟಿಕೆ ಮೇಲೆ ವಿಶೇಷ ಗಮನ ಇಡುವುದು ಅಗತ್ಯ. ಶಾಲೆಯಲ್ಲಿ ಸಮಸ್ಯೆ ಇದ್ದರೆ ಮುಖ್ಯ ಶಿಕ್ಷಕರ ಗಮನಕ್ಕೆ ತನ್ನಿ. ಅನಗತ್ಯ ಗೊಂದಲಕ್ಕೆ ಅವಕಾಶ ನೀಡಬೇಡಿ. ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಜಿ.ಪಂ. ಅಧ್ಯಕ್ಷ ಹನಗವಾಡಿ ವೀರೇಶ್, ಎಸ್ಡಿಎಂಸಿ ಅಧ್ಯಕ್ಷ ರೇವಣಸಿದ್ದಪ್ಪ, ಪ್ರಾಂಶುಪಾಲ ರಾಜಶೇಖರ್ ಮತ್ತು ಗ್ರಾಮಸ್ಥರು ಇದ್ದರು.
ಮುಂದುವರಿದ ತನಿಖೆ: ಕಂಪ್ಯೂಟರ್ ಶಿಕ್ಷಕರ ಪ್ರಕರಣವನ್ನು ಇಲ್ಲಿನ ಪೊಲೀಸರು ಕೈಗೆತ್ತಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಂಪ್ಯೂಟರ್ನಲ್ಲಿದ್ದ ಅಶ್ಲೀಲ ಭಾವಚಿತ್ರ ಇನ್ನಿತರ ಮಾಹಿತಿ ಹೊರಕ್ಕೆ ತೆಗೆಯಲಾಗಿದೆ. ಕಂಪ್ಯೂಟರ್ ಬೋಧಿಸುವ ಗುತ್ತಿಗೆ ಶಿಕ್ಷಕ ಬಸವರಾಜ್ ಹಾಗೂ ಆತನ ಸೋದರ ಹನುಮೇಶ್ ನಡೆಸುತ್ತಿದ್ದ ವ್ಯವಹಾರಗಳ ಮೇಲೆ ಕಣ್ಣಿಡಲಾಗಿದೆ. ಆತನ ವೆಬ್ಸೈಟ್ ಒಂಟಿಪ್ರೇಮಿ ಡಾಟ್ ಕಾಂ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈವರೆಗೂ ಘಟನೆ ಕುರಿತು ಯಾವುದೇ ದೂರು ಬಂದಿಲ್ಲ. ಯಾವುದೇ ಪ್ರಕರಣದಾಖಲಾಗಿಲ್ಲ.
ಘಟನೆ ಕುರಿತು ಹೆಚ್ಚಿನ ತನಿಖೆಗಾಗಿ ಸೈಬರ್ ಕ್ರೈಂ ವಿಭಾಗಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ಪಿಎಸ್ಐ ರಮೇಶ ಸೋಮವಾರ ತಿಳಿಸಿದರು.