ನವದೆಹಲಿ: ಶಿಕ್ಷಕರ ನೇಮಕಾತಿಗೆ ವಿದ್ಯಾರ್ಹತೆ ನಿಗದಿ ಸಂಬಂಧ ನೀತಿ ರೂಪಿಸುವ ಅಧಿಕಾರವನ್ನು ರಾಷ್ಟ್ರೀಯ ಬೋಧಕರ ಶಿಕ್ಷಣ ಮಂಡಳಿಗೆ (ಎನ್ಸಿಟಿಇ) ವಹಿಸುವ ಮಸೂದೆಗೆ ಸಂಸತ್ತು ಶುಕ್ರವಾರ ಅಂಗೀಕಾರ ನೀಡಿತು.
ಶಿಕ್ಷಣ ಸಂಸ್ಥೆಗಳು, ಶಾಲೆಗಳು ಮತ್ತು ವಿದ್ಯಾರ್ಥಿಗಳ ಮೇಲೆ ಇದು ನಿಯಂತ್ರಣ ಹೊಂದಿರಲಿದೆ. ರಾಷ್ಟ್ರದಾದ್ಯಂತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಮಾನ ಅವಕಾಶ ಕಲ್ಪಿಸುವುದು ಈ ಮಸೂದೆಯ ಉದ್ದೇಶ.
ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಇಂಟರ್ಮೀಡಿಯಟ್ ವ್ಯಾಪ್ತಿಯ ಶಿಕ್ಷಣ ಈ ಮಸೂದೆಯ ವ್ಯಾಪ್ತಿಗೆ ಒಳಪಡಲಿದೆ. ಪ್ರತಿ ಹಂತದ ಶಿಕ್ಷಕರ ನೇಮಕಕ್ಕೆ ಯಾವ ವಿದ್ಯಾರ್ಹತೆ ಇರಬೇಕು ಎಂಬುದನ್ನು ಮಂಡಲಿ ನಿಗದಿ ಮಾಡಲಿದೆ.
11 ನವಜಾತ ಶಿಶುಗಳ ಮರಣ: ತನಿಖೆಗೆ ಆದೇಶ
ಹೈದರಾಬಾದ್, (ಐಎಎನ್ಎಸ್): ಕರ್ನೂಲ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನಗಳ ಅಂತರದಲ್ಲಿ 11 ನವಜಾತ ಶಿಶುಗಳು ಮೃತಪಟ್ಟಿದ್ದು, ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಆಮ್ಲಜನಕ ಪೂರೈಸುವ ವ್ಯವಸ್ಥೆಯಲ್ಲಿ ದೋಷ ಉಂಟಾದ್ದರಿಂದ ಏಳು ಶಿಶುಗಳು ಗುರುವಾರ ಮೃತಪಟ್ಟಿದ್ದರೆ, ಇನ್ನು ನಾಲ್ಕು ಶುಕ್ರವಾರ ಸಾವಿಗೀಡಾಗಿವೆ. ಎಲ್ಲ ಶಿಶುಗಳೂ ಒಂದರಿಂದ ಐದು ದಿನದ ಒಳಗಿನವು.
`ವೋಟಿಗಾಗಿ ನೋಟು~: ಹಣದ ಮೂಲ ಪತ್ತೆಗೆ ಸೂಚನೆ
ನವದೆಹಲಿ (ಪಿಟಿಐ): ಯುಪಿಎ ಸರ್ಕಾರ 2008ರಲ್ಲಿ ಲೋಕಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಕ್ಕೆ ಮುನ್ನ ಸರ್ಕಾರದ ಪರ ಮತ ಹಾಕಲು ನೀಡಿತ್ತು ಎನ್ನಲಾದ ಹಣದ ಮೂಲವನ್ನು ಪತ್ತೆ ಮಾಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ.
`ಯಾರ್ಯಾರು ಯಾವ ರೀತಿಯಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸುತ್ತದೆ~ ಎಂದು ಪೀಠ ಹೇಳಿದೆ.