ಕಂಪ್ಲಿ: ಶಿಕ್ಷಕರ ವಿವಿಧ ಸಮಸ್ಯೆಗಳನ್ನು ನೇರವಾಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವ ಸದುದ್ದೇಶವೇ ಗುರುಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದ ತಿಳಿಸಿದರು.
ಪಟ್ಟಣದ 8ನೇ ವಾರ್ಡ್ನ ಸತ್ಯನಾರಾಯಣಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿ, ದೇವಸಮುದ್ರ, ಸುಗ್ಗೇನಹಳ್ಳಿ ಕ್ಲಸ್ಟರ್ ಹಾಗೂ ಎಸ್ಎಸ್ಎ ಶಿಕ್ಷಕರು ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಗುರುಸ್ಪಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರ ಸೇವೆ, ವೇತನ, ಬಡ್ತಿ, ತರಬೇತಿ, ವರ್ಗಾವಣೆ ನಂತರ ಸೇವಾ ಪುಸ್ತಕದಲ್ಲಿ ದಾಖಲಿಸುವ ಮಾಹಿತಿ ಹಾಗೂ ವರ್ಗಾವಣೆ ಆಪೇಕ್ಷೆ, ಸಾಲ ಸೌಲಭ್ಯ ಕುರಿತು ದೂರುಗಳಿದ್ದಲ್ಲಿ ಶಿಕ್ಷಕರು ಖುದ್ದಾಗಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ಶಿಕ್ಷಕರ ಇದರ ಸದುಪಯೋಗ ಪಡೆದುಕೊಳ್ಳಲಿ ಎಂದರು.
ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಪದಾಧಿಕಾರಿಗಳ ಮಟ್ಟದಲ್ಲಿ ಚರ್ಚಿಸದೆ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಅವರು ತಿಳಿಸಿದರು. ಬಹುತೇಕ ಶಿಕ್ಷಕರು ತಮ್ಮ ಶ್ರೇಣಿ ಮತ್ತು ವೇತನ ಎಷ್ಟಿದೆ ಎನ್ನುವುದರ ಬಗ್ಗೆ ತಿಳಿದಿಲ್ಲ. ಅವುಗಳ ಬಗ್ಗೆಯೂ ಶಿಕ್ಷಕರು ತಿಳಿದುಕೊಳ್ಳಬೇಕು. ಯಾವುದೇ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೊಸಪೇಟೆ ಕ್ಷೇತ್ರ ಪತ್ರಾಂಕಿತ ವ್ಯವಸ್ಥಾಪಕ ಗೋಣಿ ಬಸಪ್ಪ, ಸೇವೆಗೆ ಫಲಾಪೇಕ್ಷೆಗಳಿಲ್ಲ. ಶಿಕ್ಷಕರು ತಮ್ಮ ಕೆಲಸದಲ್ಲಿ ಗುಣಾತ್ಮಕ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹೊಸಪೇಟೆ ಕ್ಷೇತ್ರ ಸಮನ್ವಯಾಧಿಕಾರಿ ಶರಣಪ್ಪ ವಟಗಲ್, ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್. ಚಂದ್ರಶೇಖರ, ಪದಾಧಿಕಾರಿ ಕೆ.ಸಿ. ಭೀಮಣ್ಣ, ಶಿಕ್ಷಕ ಎಚ್.ಎಂ. ಗುರುಬಸವರಾಜ ಮಾತನಾಡಿದರು. ಸಿಆರ್ಪಿ ಮಹ್ಮದ್ ಇಸಾಕ್, ಮುಖ್ಯ ಶಿಕ್ಷಕರು, ಶಿಕ್ಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರ ಸಂಘದ ಖಜಾಂಚಿ ಯು. ರಾಜಶೇಖರ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಶೀಘ್ರವೇ ಕಂಪ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಗೊಳ್ಳಬೇಕ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.