ಮಧುಗಿರಿ: ಶಿಕ್ಷಕರು ಕಚೇರಿಗೆ ಅಲೆಯುವಂತೆ ಮಾಡದೆ ಅವರ ಸಮಸ್ಯೆಗಳನ್ನು ಕೂಡಲೆ ಇತ್ಯರ್ಥಪಡಿಸಬೇಕು ಎಂದು ಇಲಾಖೆಯ ಉನ್ನತಾಧಿಕಾರಿಗಳಿಗೆ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಾಕೀತು ಮಾಡಿದರು.
ಪಟ್ಟಣದಲ್ಲಿ ಈಚೆಗೆ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರ ಅನೇಕ ಬೇಡಿಕೆಗಳ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಸಮಾರಂಭ ಉಧ್ಘಾಟಿಸಿ ಮಾತನಾಡಿದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್, ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಶೀಘ್ರದಲ್ಲೆ ರಾಜ್ಯ ಮಟ್ಟದ ಹೋರಾಟ ರೂಪಿಸುವುದಾಗಿ ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಎಂ.ವೆಂಕಟರಾಮು, ಡಿ.ಡಿ.ಪಿ.ಐ ಪಿ.ಹುಚ್ಚಯ್ಯ, ಬಿಇಓ ವೈ.ಎನ್.ರಾಮಕೃಷ್ಣಯ್ಯ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ನಿವೇದಿತಾ ಶಾಲೆಯ ಕಾರ್ಯದರ್ಶಿ ಪಿ.ಎಂ.ಉಮೇಶ್, ಪಿ.ಎಸ್.ಐ. ಎಲ್.ಆಂಜಪ್ಪ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹಬೂಬ್ ಪಾಷ ಇತರರು ಉಪಸ್ಥಿತರಿದ್ದರು.
ಸನ್ಮಾನ: ಈಚೆಗೆ ನಿವೃತ್ತರಾದ ಖಜಾನಾಧಿಕಾರಿ ಹನುಮಂತರಾಯಪ್ಪ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಸದಾನಂದ ಸ್ವಾಗತಿಸಿದರು, ಗೋವಿಂದ.ಆರ್ ಮುಜುಂದಾರ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಪುತ್ರ ವಂದಿಸಿದರು.