ರಾಮದುರ್ಗ: ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಶಿಕ್ಷಕರಿಲ್ಲದೆ ಯಾವುದೇ ಕ್ಷೇತ್ರ ಬೆಳೆಯಲು ಸಾಧ್ಯವಿಲ್ಲ. ಶಿಕ್ಷಕರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ಇಲ್ಲಿಯ ಲಯನ್ಸ್ ಸಂಸ್ಥೆ ಹಾಗೂ ಲಯನ್ಸ್ ಲೇಡಿಜ್ ಆಕ್ಸಿಲರಿ ಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಗುರು ಸ್ಥಾನ ಶ್ರೇಷ್ಠವಾದುದು ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿದ್ದ ಪ್ರೊ. ಎಸ್. ಲೇಪಾಕ್ಷಿ, ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಕಾಣಬೇಕು. ಪಾಠ ಬೋಧನೆ ಜತೆಗೆ ವಿದ್ಯಾರ್ಥಿ ಗಳಲ್ಲಿ ಸಂಸ್ಕೃತಿ, ಒಳ್ಳೆಯ ಆಚಾರ- ವಿಚಾರಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.
ನಿರಂತರ ಅಧ್ಯಯನ ಪ್ರವೃತ್ತಿ ಬೆಳೆಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಿದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ಬೆಂಬಳಗಿ ಕಾಲೇಜಿನ ಪ್ರೊ. ರಾಜಶ್ರೀ ಗುದಗನವರ, ಸುರೇಬಾನ ಎಸ್.ಎಫ್. ಎಸ್. ಪ್ರೌಢಶಾಲೆಯ ಮುಖ್ಯಶಿಕ್ಷಕ ಎ.ಎಸ್.ಕುಮಠೆ, ನೇತಾಜಿ ಸುಭಾಷ ಚಂದ್ರ ಬೋಸ್ ಪ್ರೌಢಶಾಲೆಯ ಶಿಕ್ಷಕಿ ಆರ್.ಬಿ. ಜಮಖಾನೆ, ರೇವಡಿಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಂ.ಎನ್. ಅಂಬಿಗೇರ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 3 ರ ಶಿಕ್ಷಕಿ ಸಿ. ಕೆ. ಸಂಗಟಿ ಅವರನ್ನು ಸಂಸ್ಥೆಯ ಪರವಾಗಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ, ಶಾಸಕರು ಸನ್ಮಾನಿಸಿದರು.
ಡಾ.ಎಸ್.ಎಸ್. ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಿಲ್ಲಾ ಚೇರಮನ್ ವಿಜಯ ಶೆಟ್ಟಿ, ಖಜಾಂಚಿ ಜಯಂತ ಪಾಲರೇಶಾ ವೇದಿಕೆಯಲ್ಲಿದ್ದರು. ಡಾ. ಎಸ್.ಎಸ್.ಕುಲಕರ್ಣಿ ಸ್ವಾಗತಿಸಿದರು. ಆರ್.ವೈ. ಮೇತ್ರಿ ಧ್ವಜ ವಂದನೆ ಸಲ್ಲಿಸಿದರು. ಪ್ರೊ. ಸುರೇಶ ಗುದಗನವರ ಪರಿಚಯಿಸಿದರು. ಎಂ. ಎಸ್. ಜಂಗವಾಡ ನಿರೂಪಿಸಿದರು. ಬಿ. ಎಲ್. ಸಂಕನಗೌಡರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.