ಶಿವಮೊಗ್ಗ: ತೀರ್ಥಹಳ್ಳಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಯ್ದ ಶಿಕ್ಷಕರಿಗೆ ಕುಪ್ಪಳಿಯ ಹೇಮಾಂಗಣದಲ್ಲಿ ಫೆಬ್ರವರಿ 20ರಿಂದ 25ರವರೆಗೆ ವಸತಿ ಸಹಿತ ಯೋಗ-ಆರೋಗ್ಯ-ಪ್ರಶಿಕ್ಷಣ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆಯುಷ್ ಅಧಿಕಾರಿ ಕಚೇರಿ ಸಂಯುಕ್ತವಾಗಿ ಏರ್ಪಡಿಸಿರುವ ಈ ಶಿಬಿರದಲ್ಲಿ 100 ಜನ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಚ್. ಮಹಮದ್ ಹುಸೇನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಗಾಸನ, ಪ್ರಾಣಾಯಾಮ, ಧ್ಯಾನ, ಮನೆಮದ್ದು, ಕೋಪ ರಹಿತ ಧನಾತ್ಮಕ ಚಿಂತನೆ ಮತ್ತು ಆಯುರ್ವೇದ ಪದ್ಧತಿಯಲ್ಲಿ ಆರೋಗ್ಯ ರಕ್ಷಣೆ, ಆಹಾರ ಕ್ರಮಗಳು, ಔಷಧ ಸಸ್ಯಗಳ ಪರಿಚಯ, ಪ್ರಥಮ ಚಿಕಿತ್ಸೆ, ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.
ತರಬೇತಿ ಪಡೆದ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಪ್ರತಿ ದಿನ ಕನಿಷ್ಠ ಒಂದು ಗಂಟೆ ಚಿಕಿತ್ಸಾತ್ಮಕ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಕಲಿಸಬೇಕು. ಇದಕ್ಕೆ ಅವಕಾಶ ನೀಡಲು ಸಂಬಂಧಪಟ್ಟ ಮುಖ್ಯೋಪಾಧ್ಯಾಯರು, ಬ್ಲಾಕ್ ಶಿಕ್ಷಣಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಲಾಗುವುದು ಎಂದರು.
20ರಂದು ಬೆಳಿಗ್ಗೆ 11ಕ್ಕೆ ಶಾಸಕ ಕಿಮ್ಮನೆ ರತ್ನಾಕರ ಕಾರ್ಯಕ್ರಮ ಉದ್ಘಾಟಿಸುವರು. ಜಿ.ಪಂ. ಅಧ್ಯಕ್ಷರಾದ ಶುಭಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು ಎಂದರು.
ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ.ಎ. ಹಿರೇಮಠ, ಆಯುಷ್ ವೈದ್ಯಾಧಿಕಾರಿ ಡಾ.ಕೆ.ವಿ. ಪತಂಜಲಿ ಉಪಸ್ಥಿತರಿದ್ದರು.