ರಾಯಚೂರು: ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೇವಲ ಮಕ್ಕಳು ಮಾತ್ರ ಭಾಗವಹಿಸಿದರೆ ಸಾಲದು. ಪಾಲಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು ಭಾಗವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸ್ನೇಹ ಜೀವಿ ಸಂಸ್ಥೆಯ ಖಜಾಂಚಿ ಎಚ್.ದೊಡ್ಡಪ್ಪ ವಕೀಲ ಅವರು ಹೇಳಿದರು.
ಇಲ್ಲಿನ ಹರಿಜನವಾಡ ಬಡಾವಣೆಯಲ್ಲಿ ಮಂಗಳವಾರ ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆಯ ನೇತೃತ್ವದಲ್ಲಿ ಆಯೋಜಿಸಿದ್ದ ಶಾಲಾ ದಾಖಲಾತಿ ಆಂದೋಲನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆಯ ಜಿಲ್ಲಾ ಸಂಯೋಜಕ ಕೆ.ಪಿ ಅನಿಲ್ಕುಮಾರ ಮಾತನಾಡಿ, ವೇದಿಕೆಯು ನಗರ ಪ್ರದೇಶ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಥ ಜಾಗೃತಿ ಜಾಥಾವನ್ನು ನಡೆಸಲಾಗಿದೆ. ಅಂಗನವಾಡಿ, ವಸತಿ ನಿಲಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನಕ್ಕೆ ಸೆಳೆಯುವ ನಿಟ್ಟಿನಲ್ಲಿ ವೇದಿಕೆಯು ಹೋರಾಟಗಳನ್ನು ನಡೆಸಿದೆ ಎಂದು ತಿಳಿಸಿದರು.
ಗಾಜಗಾರಪೇಟೆ ಶಾಲೆಯ ಮುಖ್ಯಾಧ್ಯಾಪಕ ಜೆ.ಕರಿಯಪ್ಪ ಮಾತನಾಡಿ, ಈ ಜಾಥಾವನ್ನು ಬಡಾವಣೆಯ ಯುವಕ ಸಂಘಟನೆಯೊಂದಿಗೆ ಮಾಡುತ್ತಿರುವುದು ಸಂತಸದ ಸಂಗತಿ. ಅಲ್ಲದೇ ಶಾಲೆ ನಮ್ಮೆಲ್ಲರದು ಎಂಬ ಸಂದೇಶ ಸಾರುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪ್ರೌಢಶಾಲೆ ಮುಖ್ಯಾಧ್ಯಾಪಕ ಈರಣ್ಣ, ಶಿಕ್ಷಕಿ ವೃಂದಾ, ಹೈ.ಕ ವಿಮೋಚನಾ ಹರಿಜನವಾಡ ಘಟಕ ಅಧ್ಯಕ್ಷ ಎಂ.ಪಿ ಶಿವಪ್ಪ, ಕಾರ್ಯದರ್ಶಿ ಜಂಬಯ್ಯ, ತಾಯಪ್ಪ ಹೆಗ್ಗಸನಹಳ್ಳಿ, ನವರತ್ನ ಯುವಕ ಸಂಘದ ಅಧ್ಯಕ್ಷ ಚಂದ್ರ ಭಂಡಾರಿ, ಕಾರ್ಯದರ್ಶಿ ಜನಾರ್ದನ ಎಸ್.ವೆಂಕಟೇಶ, ಎಸ್.ಹುಲಿಗೆಪ್ಪ, ಡಾ.ಅಂಬೇಡ್ಕರ್ ಯುವಕ ಸಂಘದ ತಿಮ್ಮಪ್ಪ, ಚಿನ್ನಿ, ವೆಂಕಟೇಶ, ಡಾ.ಬಾಬು ಜಗಜೀವರಾಮ್ ಯುವಕ ಸಂಘದ ಪರಶಪ್ಪ, ರವಿ ಹಾಗೂ ಮತ್ತಿತರರಿದ್ದರು.ಆರ್.ಶಂಕರ ಹೇಮಗಡ್ಡಿ ವಂದಿಸಿದರು.