ಚಿಕ್ಕಮಗಳೂರು: ಪ್ರಸಕ್ತ ವರ್ಷದಲ್ಲಿ ಲಯನ್ಸ್ ಕ್ಲಬ್ ಶಿಕ್ಷಣ ಮತ್ತು ನೇತ್ರದಾನಕ್ಕೆ ಹೆಚ್ಚು ಒತ್ತು ನೀಡಲಿದೆ ಎಂದು ಲಯನ್ಸ್ ಸಂಸ್ಥೆ ಜಿಲ್ಲಾ ಗವರ್ನರ್ ಜಿ.ಕೃಷ್ಣಾನಂದರಾವ್ ಹೇಳಿದರು.ನಗರದ ಲಯನ್ಸ್ ಸೇವಾ ಸಂಸ್ಥೆಗೆ ಭಾನುವಾರ ಭೇಟಿ ನೀಡಿದ ಅವರು, ದಕ್ಷಿಣ ಕನ್ನಡ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಸೇರಿಸಿ ಲಯನ್ಸ್ ಜಿಲ್ಲೆ ರೂಪಿಸಲಾಗಿದೆ.
ಚಿಕ್ಕಮಗಳೂರು ಲಯನ್ಸ್ ಜಿಲ್ಲೆಯಲ್ಲಿ 1940 ಸದಸ್ಯರು ಮರಣಾ ನಂತರ ನೇತ್ರದಾನಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಕಳೆದ ವರ್ಷ 18 ಲಯನ್ಸ್ ಸದಸ್ಯರ ಕಣ್ಣುಗಳು ಮರಣಾನಂತರ ದಾನವಾಗಿ ನೀಡಲಾಗಿದ್ದು, 36 ಅಂಧರಿಗೆ ಬೆಳಕು ನೀಡಿವೆ ಎಂದು ನೆನಪಿಸಿದರು.ಮುಂದಿನ ದಿನಗಳಲ್ಲಿ ಲಯನ್ಸ್ ಕ್ಲಬ್ ಸ್ವಂತದ ‘ಬ್ಲಡ್ಬ್ಯಾಂಕ್’ ಸ್ಥಾಪಿಸಲಿದೆ. ಸದಸ್ಯರಿಗೆ ರಕ್ತದಾನ ಮಾಡಲು ಪ್ರೇರೇಪಿಸುವ ಮೂಲಕ ಸಂಗ್ರಹಿಸಿದ ರಕ್ತವನ್ನು ತುರ್ತುಸ್ಥಿತಿಯಲ್ಲಿರುವ ಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಮತ್ತು ಬಡವರಿಗೆ ಉಚಿತವಾಗಿ ನೀಡಲಾಗುವುದು ಎಂದರು.
ಈಗಾಗಲೇ ಮಂಗಳೂರು, ಸುಳ್ಯ, ಪಾಲಿಬೆಟ್ಟಗಳಲ್ಲಿ ಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಮತ್ತು ಬಡವರಿಗೆ ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದೆ. ಪ್ರಸಕ್ತ ವರ್ಷದಿಂದ ಚಿಕ್ಕಮಗಳೂರಿನಲ್ಲೂ ಆ್ಯಂಬುಲೆನ್ಸ್ ಸೇವೆ ಒದಗಿಸಲಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಸಿ.ಶಶಿಪ್ರಸಾದ್ ಅವರಿಗೆ ಜಿಲ್ಲಾ ಲಯನ್ಸ್ ಕೊಡುಗೆಯಾಗಿ ಆ್ಯಂಬುಲೆನ್ಸ್ ವಾಹನವನ್ನು ಅವರು ಹಸ್ತಾಂತರಿಸಿದರು.