ಬದಿಯಡ್ಕ: `ಕೇರಳದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಗಮನಾರ್ಹ ಪ್ರಗತಿ ಸಾಧಿಸಿಲ್ಲ. ಈ ಕೊರತೆ ನೀಗಿಸಲು ಶಿಕ್ಷಣ ಗುಣಮಟ್ಟದ ವಿಕಸನಕ್ಕೆ ಆದ್ಯತೆ ನೀಡಬೇಕು' ಎಂದು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಹೇಳಿದರು.
ಪೆರ್ಲ ಸಮೀಪದ ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಸೋಮವಾರ ಔಪಚಾರಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ರೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಎಂ. ಅಬೂಬಕರ್, ಪುತ್ತಿಗೆ ಗ್ರಾಪಂ ಅಧ್ಯಕ್ಷ ಪಿ.ಎ. ಚನಿಯ, ಎಣ್ಮಕಜೆ ಗ್ರಾಪಂ ಉಪಾಧ್ಯಕ್ಷೆ ಆಯಿಷಾ ಎ ಎ, ಮಂಜೇಶ್ವರ ಬ್ಲೋಕ್ ಪಂಚಾಯಿತಿ ಸದಸ್ಯ ರಾಮಕೃಷ್ಣ ರೆ ಮತ್ತಿತರರು ಇದ್ದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಜತ್ತಪ್ಪ ರೈ ಸ್ವಾಗತಿಸಿದರು.
ಸೋಮವಾರ ಸಂಜೆಯವರೆಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಎಲ್ಪಿ ವಿಭಾಗದಲ್ಲಿ ಕಾರಡ್ಕ ಶಾಲೆ (24 ಅಂಕ), ಕುಂಟಿಕಾನ ಶಾಲೆ(14), ಯುಪಿ ವಿಭಾಗದಲ್ಲಿ ಶೇಣಿ ಶಾಲೆ(32), ಬೇಳ ಶಾಲೆ(31), ಪ್ರೌಢಶಾಲಾ ವಿಭಾಗದಲ್ಲಿ ನೀರ್ಚಾಲು (63), ಕಾರಡ್ಕ(48), ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ (69), ಮುಳ್ಳೇರಿಯಾ (49) ಅಂಕ ಪಡೆದಿವೆ.