ಮೆಲ್ಬರ್ನ್ (ಪಿಟಿಐ): ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿರುದ್ಧ ತಾನು ನೀಡಿರುವ ದೂರನ್ನು ಹಿಂದಕ್ಕೆ ಪಡೆಯುವಂತೆ ಆ ಸಂಸ್ಥೆಯ ಆಡಳಿತಗಾರರು ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಯೊಬ್ಬ ಪೋಲಿಸರಿಗೆ ದೂರು ನೀಡಿದ್ದಾನೆ. ವಿಶೇಷವೆಂದರೆ ಆರೋಪಕ್ಕೆ ಒಳಗಾಗಿರುವ ಸೌತ್ ಪೆಸಿಫಿಕ್ ಶಿಕ್ಷಣ ಸಂಸ್ಥೆಯ ಆ ಮೂವರು ಆಡಳಿತಗಾರರು ಕೂಡಾ ಭಾರತೀಯ ಮೂಲದವರೇ ಆಗಿದ್ದಾರೆ.
ಆ ಸಂಸ್ಥೆ ನೀಡುತ್ತಿರುವ ಶಿಕ್ಷಣದ ಗುಣಮಟ್ಟ ಕಳಪೆಯಾಗಿದ್ದು, ಅಲ್ಲಿನ ಶಿಕ್ಷಕರು ಹಣ ಪಡೆದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕವನ್ನು ನೀಡುತ್ತಿದ್ದಾರೆ ಹಾಗೂ ಅನರ್ಹ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಈ ವಿದ್ಯಾರ್ಥಿ 2009ರಲ್ಲಿ ದೂರು ನೀಡಿದ್ದು ಅದನ್ನು ವಾಪಸ್ ಪಡೆಯುವಂತೆ ಈ ಮೂವರು ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸೌತ್ ಪೆಸಿಫಿಕ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಗುರುವಿಂದ್ ಸಿಂಗ್, ಕನ್ವಲ್ ಸಿಂಗ್ ಮತ್ತು ಆಯುಶ್ ಗುಪ್ತ ಅವರ ಮೇಲೆ ವಿಕ್ಟೋರಿಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು `ದಿ ಏಜ್~ ಪತ್ರಿಕೆ ವರದಿ ಮಾಡಿದೆ. ಈ ಶಿಕ್ಷಣ ಸಂಸ್ಥೆಯ ಮೇಲೆ ಆರೋಪಗಳು ಇದ್ದರೂ ಪ್ರಾಂತೀಯ ಶಿಕ್ಷಣ ಮಂಡಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಪತ್ರಿಕೆಯು ತನ್ನ ವರದಿಯಲ್ಲಿ ಹೇಳಿದೆ.