ಬೆಂಗಳೂರು: ‘ಒಂದು ಶಿಕ್ಷಣ ಸಂಸ್ಥೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಕೈರಳಿ ನಿಕೇತನ ಶಿಕ್ಷಣ ಟ್ರಸ್ಟ್ನ ಇಂದಿರಾನಗರ ಪ್ರೌಢಶಾಲೆಯ ಸುವರ್ಣಮಹೋತ್ಸವ ಮತ್ತು ಕೆ.ಎನ್.ಇಂಗ್ಲಿಷ್ ಪ್ರೌಢಶಾಲೆಯ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇರಳ ಅತ್ಯಂತ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳನ್ನು ಹೊಂದಿರುವ ರಾಜ್ಯ. ಅಲ್ಲಿನವರು ಇಲ್ಲಿಗೆ ಬಂದು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ತಮ್ಮ ಮೂಲ ಸಂಸ್ಕೃತಿ ಉಳಿಸಿಕೊಳ್ಳಬೇಕು ಎಂದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಕೈರಳಿ ನಿಕೇತನ ಶಿಕ್ಷಣ ಟ್ರಸ್ಟ್ ಯಾವುದೇ ಬೇಧವಿಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ರಾಜ್ಯದಲ್ಲಿ ಈವರೆಗೂ 11 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ 4 ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಶ್ಲಾಘಿಸಿದರು.ಇದೇ ವೇಳೆ ಜೋಗುಪಾಳ್ಯದಲ್ಲಿರುವ ಟ್ರಸ್ಟ್ನ ಶಾಲೆಗೆ ಸಂಸದರ ನಿಧಿಯಿಂದ ₨25 ಲಕ್ಷ ನೀಡಲಾಗುವುದು ಎಂದರು.
ಸಚಿವ ಕೆ.ಜೆ.ಜಾರ್ಜ್, ಶಾಸಕ ಎನ್.ಎ.ಹ್ಯಾರೀಸ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಜೆ.ಅಲೆಕ್ಸಾಂಡರ್, ಟ್ರಸ್ಟ್ ಅಧ್ಯಕ್ಷ ಸಿ.ಜೆ.ಕುಂಚೇರಿಯ ಇದ್ದರು.