ಕೊಪ್ಪಳ: ಪ್ರತಿಯೊಬ್ಬರೂ ತಾವು ಪಡೆಯುವ ಶಿಕ್ಷಣವನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕೇ ಹೊರತು ಕೇವಲ ಹಣ ಗಳಿಕೆಗೆ ಸೀಮತವಾಗಬಾರದು ಎಂದು ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಎ.ಜಿ.ಎಸ್.ಕೆ. ಸೊಸೈಟಿಯ ಮಿಲೇನಿಯಂ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ವಾರ್ಷಿಕ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಒಳ್ಳೆಯ ಮನುಷ್ಯನಾಗುವುದು ಮುಖ್ಯ. ಈ ದಿಶೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಈ ದೇಶದ ಒಳ್ಳೆಯ ನಾಗರಿಕರನ್ನಾಗಿ ಮಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದೂ ಅವರು ಹೇಳಿದರು.
ಬದುಕಿನಲ್ಲಿ ಸೋಲು ಎದುರಾದಾಗ ಹೇಗೆ ಹೋರಾಡಬೇಕು ಎಂಬುದನ್ನು ಕಲಿಸಬೇಕು. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಬೇಕು. ಶ್ರೀಮಂತರಾಗಲು ಶಿಕ್ಷಣ ಕಲಿಯುವ ಉದ್ದೇಶ ಇಟ್ಟುಕೊಳ್ಳಬಾರದು. ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವಂತಹ ಕೆಲಸ ಶಿಕ್ಷಣ ಸಂಸ್ಥೆಗಳಿಂದಾಗಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ವಹಿಸಿದ್ದರು.ಆರೆಸ್ ಸ್ಟೀಲ್ ಕಂಪೆನಿಯ ಉಪಾಧ್ಯಕ್ಷ (ಯೋಜನೆಗಳು) ಎಂ.ಎಂ. ಪಾಟೀಲ್, ಬಳ್ಳಾರಿಯ ಡಾ.ಜಯಣ್ಣ, ವಿ.ಪಿ.ದುಗ್ಗಪ್ಪ, ನವೀನ ಗುಳಗಣ್ಣನವರ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಆರ್. ನವಲಿಹಿರೇಮಠ, ಬಸವರಾಜ ಪುರದ, ಪ್ರಭು ಹೆಬ್ಬಾಳ, ಎಸ್.ಬಿ.ಪಾಟೀಲ್, ಸಂಸ್ಥೆಯ ಕಾರ್ಯದರ್ಶಿ ಗಿರೀಶ ಕಣವಿ ಪಾಲ್ಗೊಂಡಿದ್ದರು.
ನಂತರ ಬಿ.ಪ್ರಾಣೇಶ್ ಹಾಗೂ ನರಸಿಂಹ ಜೋಷಿಯವರಿಂದ ನಗೆ ಹನಿ ಹಾಗೂ ಎಂ.ಬಿ.ಎ., ಬಿ.ಬಿ.ಎಂ. ವಿದ್ಯಾರ್ಥಿ ವೃಂದದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.