ಬೆಂಗಳೂರು: `ಉತ್ತಮ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಪ್ರತಿಯೊಂದು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ' ಎಂದು ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಹೇಳಿದರು.
ದೇವಾಂಗ ಸಂಘದ ಶಾಲಾ ಕಟ್ಟಡದ ಉದ್ಘಾಟನೆ ಮತ್ತು ಕಾಲೇಜು ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.
`ಹಿಂದುಳಿದ ದೇವಾಂಗ ಸಮಾಜದವರು ಹೆಚ್ಚು ಹೆಚ್ಚು ಶಾಲೆ-ಕಾಲೇಜುಗಳು ಸ್ಥಾಪಿಸಬೇಕಾದ ಅಗತ್ಯವಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ನಿಡುವ ಸಮಾಜವು ಅಭಿವೃದ್ಧಿಯಾಗುತ್ತದೆ' ಎಂದರು.
`ದೇವಾಂಗ ಸಂಘವು ಜಾತಿ ಬೇಧವಿಲ್ಲದೇ ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಯಾಗಿದ್ದು, ದೇವಾಂಗ ಸಂಘವು ನಿರ್ಮಿಸುತ್ತಿರುವ ನೂತನ ಶಾಲಾ ಕಟ್ಟಡಕ್ಕೆ ಈಗಾಗಲೇ 25 ಲಕ್ಷ ರೂಪಾಯಿಗಳನ್ನು ಸಂಸದರ ನಿಧಿಯಿಂದ ನೀಡಿದ್ದು, ಮತ್ತೆ 25 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗುವುದು' ಎಂದು ತಿಳಿಸಿದರು.
ಶಾಸಕ ಆರ್.ರೋಷನ್ಬೇಗ್ ಮಾತನಾಡಿ, `ನಗರದ ಬನ್ನಪ್ಪ ಪಾರ್ಕ್ನಲ್ಲಿ ಶೀಘ್ರ ದೇವರ ದಾಸಿಮಯ್ಯನವರ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಪ್ರತಿಮೆ ನಿರ್ಮಾಣಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡಲಾಗುವುದು' ಎಂದು ಹೇಳಿದರು.
ಹಂಪಿ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ಸಂಘದ ಅಧ್ಯಕ್ಷ ಸ.ಸೂರ್ಯನಾರಾಯಣ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎಂ.ಕೆ.ಗುಣಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.