ಚಿಕ್ಕಬಳ್ಳಾಪುರ: `ವಿದ್ಯಾರ್ಥಿಗಳು ದೈನಂದಿನ ಶಿಕ್ಷಣದ ಜೊತೆಗೆ ಆರೋಗ್ಯ ವೃದ್ಧಿಸುವ ದೈಹಿಕ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವುದು ತುಂಬ ಮುಖ್ಯ. ಆರೋಗ್ಯ ರಕ್ಷಣೆಗಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ~ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಮುಮ್ತಾಜ್ ಅಲಿ ಖಾನ್ ತಿಳಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಮಟ್ಟದ ಪೈಕಾ ಮತ್ತು ದಸರಾ ಕ್ರೀಡಾಕೂಟಕ್ಕೆ ಭಾನುವಾರ ಚಾಲನೆ ನೀಡಿದ ಅವರು, `ಶಿಕ್ಷಣದ ಜೊತೆ ಕ್ರೀಡಾ ಚಟುವಟಿಕೆಯ ಕಡೆಗೂ ಆಸಕ್ತಿಯಿದ್ದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು~ ಎಂದರು.
`ಖ್ಯಾತನಾಮರಾಗಿರುವ ಈಗಿನ ಕ್ರೀಡಾಪಟುಗಳಲ್ಲಿ ಬಹುತೇಕ ಮಂದಿ ಶಾಲಾ-ಕಾಲೇಜಿನಲ್ಲಿ ಇರುವಾಗಲೇ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಂಡವರು. ಅದಕ್ಕೆ ತಕ್ಕಂತೆ ಸಾಧನೆ ಮಾಡಿದರು. ಪರಿಶ್ರಮದ ಜೊತೆ ಪ್ರಾಮಾಣಿಕ ಪ್ರಯತ್ನ ನಡೆಸಿದವರು~ ಎಂದರು.
ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, `ತಾಲ್ಲೂಕು ಮಟ್ಟದಿಂದ ಆಯ್ಕೆಗೊಂಡು ನೀವೆಲ್ಲ ಇಲ್ಲಿಗೆ ಬಂದಿದ್ದೀರಿ. ಹೆಚ್ಚಿನ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು. ಅಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು~ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಉಪವಿಭಾಗಾಧಿಕಾರಿ ಸತೀಶ್ಕುಮಾರ್, ಅಂತರರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಕೆ.ಶ್ರೀನಿವಾಸ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.