ರಾಮನಗರ: ಇಂಗ್ಲಿಷ್ ಶಿಕ್ಷಣದ ಹೆಸರಲ್ಲಿ ವ್ಯಾಪಾರೀಕರಣ ಮಾಡುವುದು ದೇಶ ದ್ರೋಹದ ಕೆಲಸ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಿ.ಸಿ.ಮೈಲಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳು ಅಧಿಕ ವಂತಿಗೆ ವಸೂಲಿ ಮಾಡಿ ಪೋಷಕರನ್ನು ಶೋಷಿಸುತ್ತಿವೆ. ಇದರಿಂದ ಅಧ್ಯಾಪಕ ವರ್ಗದ ಶೋಷಣೆ ನಡೆಯುತ್ತಿದೆ. ಭಾಷೆಯ ಹೆಸರಿನಲ್ಲಿ ಹಣ ಸಂಪಾದಿಸುವುದು ದೊಡ್ಡ ವಿಪರ್ಯಾಸವಾಗಿದೆ. ಇದು ಖಂಡನೀಯ ಎಂದು ಅವರು ಹೇಳಿದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಕೆ.ಎನ್.ಪುಷ್ಪಲತಾ ಮಾತನಾಡಿ, ಹೆಣ್ಣು ಮಕ್ಕಳು ಉತ್ತಮ ಜ್ಞಾನಸಂಪಾದನೆ ಮಾಡಬೇಕು. ಆ ಮೂಲಕ ಸಾಮಾಜಿಕ ಮತ್ತು ಕೌಟುಂಬಿಕ ಬದುಕಿನಲ್ಲಿ ಯಶಸ್ಸು ಗಳಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪುಟ್ಟಮ್ಮ ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಿ.ಶಿವಣ್ಣ ವಾರ್ಷಿಕ ವರದಿ ವಾಚಿಸಿದರು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪದವಿಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಆಡಳಿತ ಮಂಡಳಿಯ ಸದಸ್ಯರಾದ ಉಷಾ ಆಚಾರ್ಯ, ಪ್ರಾಂಶುಪಾಲ ಬಿ.ಗೋಪಾಲ್, ಎಸ್. ಪಿ.ಹೊದ್ಲೂರ್ ಉಪನ್ಯಾಸಕರುಗಳಾದ ಪಿ.ಮಂಜುಳಾ, ವೆಂಕಟಾಚಲಯ್ಯ, ಜಿ.ಎಮ್.ವೀಣಾ, ಶಶಿಕಲಾ, ಎಸ್.ಭವ್ಯ, ಗೀತಾರಾಣಿ, ರುದ್ರೇಶ್, ಚೇತನ್, ಭೈರೇಶ್, ಕೃಷ್ಣನಾಯಕ್, ಮಂಜುನಾಥ್, ಮಹೇಶ್, ಲೋಕೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.