ಹೊಸಪೇಟೆ: ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಲಂಬಾಣಿಗಳು ಸುಶಿಕ್ಷಿತರಾಗುವ ಮೂಲಕ ಮುಖ್ಯವಾಹಿನಿಯಲ್ಲಿ ಕಾಣುವಂತಾಗಬೇಕು ಎಂದು ವಿಜಾಪುರ ಅಪರ ಜಿಲ್ಲಾಧಿಕಾರಿಗಳಾಗಿರುವ ಕಾಶೀನಾಥ ಪವಾರ್ ಹೇಳಿದರು.
ಹೊಸಪೇಟೆ ಬಂಜಾರ ಹಿಲ್ಸ್ನಲ್ಲಿ ಆಯೋಜಿಸಿದ್ದ 273ನೇ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಸಮಾಜದಲ್ಲಿ ಸಂಘಟನೆಯ ಕೊರತೆಯಿಂದ ಅನೇಕ ಸಮಸ್ಯೆಗಳು ಇನ್ನು ಸಮಸ್ಯೆಗಳಾಗಿಯೇ ಉಳಿದಿವೆ, ಸಂಘಟನೆ ಮತ್ತು ಶಿಕ್ಷಣ ಪಡೆಯುವ ಮೂಲಕ ಸ್ವಾವಲಂಬಿಗಳಾಗಬೇಕು ಯುವ ಜನಾಂಗ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದು ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಉನ್ನತಿಗೂ ಪೂರಕವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಆನೆಕಲ್ಲಿನ ರಾಮಚಂದ್ರದಾಸ್ ರಚಿಸಿದ ಪುಸ್ತಕ `ಸಂಪೂರ್ಣ ಶ್ರೀಸೇವಾಲಾಲ್ ಕಥಾಮೃತ~ವನ್ನು ಲೋಕಾಪರ್ಣೆ ಮಾಡಿ ಮಾತನಾಡಿದ ಧಮೇಂದ್ರಸಿಂಗ್ ಸಮಾಜದಲ್ಲಿ ಅತ್ಯಂತ ಹಿಂದೂಳಿದ ಲಂಬಾಣಿ ಜನಾಂಗ ಆರ್ಥಿಕ ಸ್ವಾವಲಂಭನೆಯನ್ನು ಸಾಧಿಸಬೇಕು ಎಂದು ನುಡಿದರು.
ಸರ್ಕಾರದ ಯೋಜನೆಗಳ ಮೂಲಕ ಮಕ್ಕಳ ಶಿಕ್ಷಣ ಯೋಜನೆಗಳ ಮೂಲಕ ಆರ್ಥಿಕ ಪ್ರಗತಿ ಹೊಂದುವಂತೆ ಆಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೊಟ್ರೇಶ್, ಜಿಲ್ಲಾ ಪಂಚಾಯ್ತಿ ಎಲ್.ಭೀಮಾನಾಯ್ಕ ಮಾತನಾಡಿ ಹಿಂದುಳಿದ ಸಮಾಜದ ಅಭಿವೃದ್ಧಿಗೆ ರಚಿಸಿರುವ ನಿಗಮ ಹೆಚ್ಚು ಹೆಚ್ಚು ಯುವಕರಿಗೆ ಸಹಕಾರ ನೀಡಬೇಕು, ಸೇವಾಲಾಲ್ ಜಯಂತಿಯನ್ನು ಸರ್ಕಾರ ರಜೆ ಘೋಷಿಸುವ ಮೂಲಕ ಆಚರಿಸುವಂತಾಗಬೇಕು ಎಂದರು.
ಶ್ರೀ ಸರ್ದಾರ ಸೇವಾಲಾಲ್ ಮಹಾರಾಜರು ಮಾತನಾಡಿ ನಮ್ಮ ಜೀವನ ಹೇಗಾಗಿದೆಯೋ ಎನ್ನುವುದನ್ನು ಬಿಟ್ಟು ಮಕ್ಕಳ ಉತ್ತಮ ಭವಿಷ್ಯಕ್ಕೆ ತಂದೆ ತಾಯಿಗಳು ಚಿಂತಿಸುವಂತಾಗಬೇಕು, ಅನಿಷ್ಟ ಪದ್ದತಿಗಳನ್ನು ಬಿಟ್ಟು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಪ್ರಗತಿಯತ್ತ ಮುಖ ಮಾಡಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಿ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಸೇವಾಲಾಲ್ ಮಹಾರಾಜರ ಭವ್ಯ ಮೇರವಣಿಗೆ ಸಾಂಪ್ರದಾಯಿಕ ನೃತ್ಯಗಳೊಂದಿಗೆ ನಡೆದು ಆಕರ್ಷಣೆ ನೀಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಶಂಕರಲಿಂಗೇ ಸ್ವಾಮೀಜಿ, ಪ್ರಕಾಶ ಸ್ವಾಮೀಜಿ, ತಿಪ್ಪಿಬಾಯಿ ಠಾಕ್ರ್ಯಾನಾಯ್ಕ, ನೀಲಾನಾಯ್ಕ, ಕೃಷ್ಣಾ ನಾಯ್ಕ, ಭೀಮಾನಾಯ್ಕ, ಅಧ್ಯಕ್ಷ ಎಲ್.ಡಿ. ಲಕ್ಷ್ಮಣ, ಎಂ.ಗೋವಿಂದನಾಯ್ಕ, ಸೇರಿದಂತೆ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.