ದೊಡ್ಡಬಳ್ಳಾಪುರ: ಶಿಕ್ಷಣ ಬದುಕಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹಾದೇವಪ್ಪ ತಿಳಿಸಿದರು.
ನಗರದ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿ ಎಂದು ಭಾವಿಸಬಾರದು. ಕಾರ್ಲ್ಮಾರ್ಕ್ಸ್ ಸೇರಿದಂತೆ ಜಗತ್ತಿನಲ್ಲಿ ಬಹುತೇಕ ಸಾಧಕರು ಬಡತನದಲ್ಲೇ ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚಿಗೆ ಉನ್ನತ ಶಿಕ್ಷಣಕ್ಕೆ ಸೀಟು ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯುವ ಸಮುದಾಯವನ್ನು ಗಮನಿಸಿದರೆ ವಿಷಾದ ಎನಿಸುತ್ತದೆ ಎಂದರು.
ವೈಚಾರಿಕ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಅರ್ಥ ಮಾಡಿಸಬೇಕಾಗಿದೆ. ಸಮಾಜದ ಮೌಢ್ಯತೆಯನ್ನು ಹೋಗಲಾಡಿಸುವ ಶಿಕ್ಷಣ ಅಗತ್ಯವಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ದೇಶದ ಸಂಪತ್ತು. ಇಂತಹವರಿಗೆ ನೀಡುವ ಶಿಕ್ಷಣ ವೈಚಾರಿಕತೆಯಿಂದ ಕೂಡಿರಬೇಕು. ಓದಿನ ಮಾತ್ರ ಸಮಾನತೆ ಮತ್ತು ಸ್ಥಾನಮಾನ ದೊರೆಯಲಿದೆ.
ಶಿಕ್ಷಕರು ಪುಸ್ತಕಗಳ ಓದಿನ ಕಡೆಗೆ ಆಸಕ್ತಿವಹಿಸಬೇಕು ಎಂದರು. ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್.ಶಂಕರಯ್ಯ, ಗೌರವ ಕಾರ್ಯದರ್ಶಿ ಎಂ.ಅಶ್ವತ್ಥಯ್ಯ, ಎ.ಜಿ.ಶ್ರೀನಿವಾಸಮೂರ್ತಿ, ಖಜಾಂಚಿ ಡಿ.ಪ್ರಭುದೇವಯ್ಯ, ಆಡಳಿತ ಮಂಡಳಿ ನಿರ್ದೇಶಕರು, ಪ್ರಾಚಾರ್ಯ ಎಸ್.ಮಹಾಬಲೇಶ್ವರ್, ಉಪಪ್ರಾಚಾರ್ಯರಾದ ಎಸ್.ರಾಜಲಕ್ಷ್ಮಿ, ಕೊಂಗಾಡಿಯಪ್ಪ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ವಿ.ಸುಬ್ರಮಣ್ಯಂ ಮುಂತಾದವರು ಭಾಗವಹಿಸಿದ್ದರು.