ಗದಗ: ಅವಕಾಶ ವಂಚಿತರು ಶಿಕ್ಷಣ ಪಡೆದಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ. ಆದ್ದರಿಂದ ಸಂಘಟನೆಗಳು ಹೆಚ್ಚು ಕ್ರೀಯಾಶೀಲರಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 57 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ ಚಿಂತನೆಗಳು, ಅವರ ದೂರದೃಷ್ಟಿ, ಸಂವಿಧಾನ ಮೂಲಕ ದೇಶದ ಅವಕಾಶ ವಂಚಿತರಿಗೆ ಸಾಕಷ್ಟು ಅವಕಾಶ ನೀಡಿದೆ. ಪ್ರತಿ ರಂಗದಲ್ಲಿ ಶಿಕ್ಷಣ ಅತೀ ಮಹತ್ವವಾದ ಸಾಧನವಾಗಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಮುಂದಾಗಬೇಕು ಎಂದರು.
ಸಾಹಿತಿ ಡಾ. ಅರ್ಜುನ ಗೋಳಸಂಗಿ ಮಾತನಾಡಿ, ಅಂಬೇಡ್ಕರರ ಸಮಾನತೆಯ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ನಾಡಿನ ಏಕತೆ ಅಖಂಡತೆಗಾಗಿ ಎಲ್ಲರೂ ಸದ್ಭಾವನೆ ರೂಢಿಸಿಕೊಳ್ಳಲು ಸಮಾಜದಲ್ಲಿ ಅಶಾಂತಿ ದೂರ ಮಾಡಲು ಸ್ಫೂರ್ತಿ ನೀಡಲಿ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಎಸ್.ಎನ್.ಬಳ್ಳಾರಿಯ ಮಾತನಾಡಿ, ಅಂಬೇಡ್ಕರರ ಸಾಮಾಜಿಕ ಚಿಂತನೆಗಳ ಪ್ರಸ್ತುತತೆ ತಿಳಿಸಿ ಅವರ ತತ್ವ ಆದರ್ಶಗಳನ್ನು ಪಾಲಿಸಲು ಸಲಹೆ ನೀಡಿದರು. ಲಿಂಗಾಯತ ಪ್ರಗತಿಶೀಲದ ಆಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿದರು.
ನಂತರ ರ್್ಯಾಲಿಯು ನಗರದ ಭೂಮರೆಡ್ಡಿ ಸರ್ಕಲ್, ಕೆ.ಎಚ್. ಪಾಟೀಲ ಪ್ರತಿಮೆ, ಬಸ್ ನಿಲ್ದಾಣ ಮೂಲಕ ಬಸವರಾಜ ಕಡೇಮನಿ, ಸತೀಶ ಹೂಲಿ, ಪರುಶುರಾಮ ಪೂಜಾರ, ಯುವರಾಜ ಬಳ್ಳಾರಿ ವಿಶ್ವನಾಥ ದೊಡ್ಡಮನಿ ನೇತೃತ್ವದಲ್ಲಿ ಸಂಚರಿಸಿತು. ಸಂತೋಷ ಬಳ್ಳಾರಿ ಸ್ವಾಗತಿಸಿದರು. ಚಂದ್ರಶೇಖರ ಮೇಲಿನಮನಿ ವಂದಿಸಿದರು.
‘ಅಂಬೇಡ್ಕರ್ ತತ್ವ ಮಾದರಿ’
ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಎಸ್. ಸಿ., ಎಸ್.ಟಿ. ನೌಕರರ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ 57 ನೇ ಪರಿನಿರ್ವಾಣ ನಿಮಿತ್ತ ಸಂಸ್ಥೆಯ ವಿಭಾಗೀಯ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕ ಪುಷ್ಪರ್ಚಾಣೆ ಮಾಡಲಾಯಿತು.
ಸಮಾರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರವರ ಭಾವಚಿತ್ರಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಸಿ. ಗದ್ದಿಕೇರಿ ಅವರು ಪುಷ್ಪನಮನ ಅರ್ಪಿಸಿದರು. ಮುಖಂಡರಾದ ಎಸ್. ಎನ್. ಬಳ್ಳಾರಿ ಹಾಗೂ ಯುವ ಧುರೀಣ ವಿದ್ಯಾದಾರ ದೊಡ್ಡಮನಿ ಇದ್ದರು.
ಬಿ.ಸಿ.ಗದ್ದಿಕೇರಿ ಮಾತನಾಡಿ, ಅಂಬೇಡ್ಕರ್ ಅವರ ತತ್ವ, ಆದರ್ಶ ಮಾದರಿ ಆಗಬೇಕು. ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿ ಅವರ ಕನಸನ್ನು ನನಸಾಗಿಸಬೇಕು. ಸೇವೆ ಸಲ್ಲಿಸುವ ಸ್ಥಳವೇ ಒಂದು ಚೈತ್ಯ ಭೂಮಿ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕೊಪ್ಪಳ, ಪದಾಧಿಕಾರಿಗಳಾದ ಎಸ್.ಬ. ಪಡಸಾಲಿ, ಎಂ. ಆಂಜನೇಯ, ರಮೇಶ ಚಲವಾದಿ, ಎಂ. ಎಸ್. ನಾಯ್ಕರ, ಲೆಂಕೆಣ್ಣವರ, ವೆಂಕಟೇಶ ಲಮಾಣಿ, ಮ್ಯಾಟೆಣ್ಣವರ, ನಾಯ್ಕರ ಮತ್ತು ಕಡೇಮನಿ, ಎಂ.ವಿ.ಹೊಸಮನಿ, ಎಂ. ಎ. ಖಾದ್ರಿ, ಜಗದೀಶ ಕೋಳಿ, ಶಾಂತಪ್ಪ ಮುಳವಾಡ ಮಾತನಾಡಿದರು. ಕಾರ್ಮಿಕ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ನಿರೂಪಿಸಿದರು. ಇದೇ ಸಭೆಯಲ್ಲಿ ನಲ್ಸನ್ ಮಂಡೆಲಾಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
‘ಆದರ್ಶ ಅಳವಡಿಸಿಕೊಳ್ಳಿ’
ರೋಣ: ಪ್ರಜಾಪ್ರಭುತ್ವದ ಅಡಿಯಲ್ಲಿ ಜೀವನವನ್ನು ನಿರ್ವಹಿಸುತ್ತಿರುವ ನಮಗೆಲ್ಲರಿಗೂ ಮಹನೀಯರ ತತ್ವಗಳು ಮತ್ತು ಅವರ ಆದರ್ಶ ಗುಣಗಳು ನಮ್ಮ ಜೀವನದಲ್ಲಿ ಅಡಕವಾಗಬೇಕು ಎಂದು ಯುವ ಮುಖಂಡ ಸಂಜಯ ದೊಡ್ಡಮನಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಹಿಂದುಳಿದ ವಸತಿ ನಿಲಯದ ಸಭಾಂಗಣದಲ್ಲಿ ಜರುಗಿದ ಡಾ. ಬಿ.ಆರ್. ಅಂಬೆಡ್ಕರ್ ಅವರ 57 ನೇ ಮಹಾಪರಿ ನಿರ್ವಾಣ ದಿನ ಕಾರ್ಯಕ್ರಮದಲ್ಲಿಬಡ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸಿ ಮಾತನಾಡಿದರು.
ದೇಶದ ಸುಭದ್ರತೆ ಮತ್ತು ಸೌಹಾರ್ಧತೆಗಾಗಿ ಜೀವನದ ಉದ್ದಕ್ಕೂ ತಮ್ಮ ಜೀವನವನ್ನು ತ್ಯಾಗ ಮಾಡಿದ ಡಾ. ಬಿ.ಆರ್. ಅಂಬೆಡ್ಕರ್ ಅವರು ಸರ್ವರು ಸಮನಾಗಿ ಬಾಳಲಿ ಎಂಬ ಮಹತ್ವದ ಉದ್ದೇಶವನ್ನು ಹೊಂದಿ ಸಂವಿಧಾನವನ್ನು ರಚಿಸಿದರು. ಇಂಥ ಮಹಾನ್ ವ್ಯಕ್ತಿಯ ಆದರ್ಶ ಗುಣಗಳು ನಮ್ಮ ಜೀವನದಲ್ಲಿ ಅಡಕವಾಗಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಅಂಬೆಡ್ಕರರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಂಜಯ ದೊಡ್ಡಮನಿ 250 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಲೇಖನಿಗಳನ್ನು ವಿತರಿಸಿದರು.
ಮಾರುತಿ ಹುಬ್ಬಳ್ಳಿ, ದೇವಪ್ಪ ಚಲವಾದಿ, ಸಮೀರ್ ಮುಲ್ಲಾ, ಬಸವರಾಜ ಕಾಳೆ, ಪ್ರಕಾಶ ಮಾದರ, ಮಾರುತಿ ಚನ್ನದಾಸರ, ಮೈಬು ತುಗ್ಗಲದೊಣಿ, ಚಂದ್ರು ಕುರಿ, ಅಲ್ಲಾಭಕ್ಷ ಇಟಗಿ ಸೇರಿದಂತೆ ಇತರರು ಹಾಜರಿದ್ದರು.ಬಸವರಾಜ ಹುಬ್ಬಳ್ಳಿ ಸ್ವಾಗತಿಸಿದರು, ಸುನೀಲ ಹಿರೇಮಠ ನಿರೂಪಿಸಿದರು, ಕಿರಣ ಭಜಂತ್ರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.