ಕನಕಗಿರಿ: ಯಾವುದೇ ಸಮಾಜದ ಅಭಿವೃದ್ಧಿ ಶಿಕ್ಷಣದ ಮೇಲೆ ಅವಲಂಬಿತವಾಗಿದೆ, ಶೋಷಿತ ಹಾಗೂ ಹಿಂದುಳಿದ ಸಮಾಜಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ಮುಂದುವರಿದ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಮೀಪದ ಗೌರಿಪುರ ಗ್ರಾಮದ ಹಾಲುಮತ ಸಮಾಜ ಬಾಂಧವರು ಸೋಮವಾರ ಆಯೋಜಿಸಿದ್ದ ಭಕ್ತ ಕನಕದಾಸ ಅವರ 526ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಧಾರಣೆಗೊಳ್ಳುವುದರಿಂದ ಇಡೀ ಕುರುಬ ಸಮುದಾಯ ಅಭಿವೃದ್ಧಿಗೊಳ್ಳುವುದಿಲ್ಲ, ಸಚಿವ ತಂಗಡಗಿ ಪ್ರಗತಿ ಸಾಧಿಸಿದರೆ ರಾಜ್ಯದ ಭೋವಿ ಸಮಾಜ ಏಳ್ಗೆಯಾದಂತೆ ಆಗುವುದಿಲ್ಲ, ಹೀಗಾಗಿ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಬೇಕೆಂದು ಅವರು ಆಶಿಸಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ನಿವೃತ್ತ ಉಪನ್ಯಾಸಕ ಪರಮೇಶ್ವರಪ್ಪ ದಂಡೀನ್, ಶಿಕ್ಷಕ ಬಸವರಾಜ ಕೊಂಡಗುರಿ, ಸಮಾಜದ ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದಪ್ಪ ನೀರಲೂಟಿ ಮಾತನಾಡಿದರು. ಕೊರಡಕೇರಾದ ಕಳಕಯ್ಯ ಗಂಗಯ್ಯ ಗುರುವಿನ್, ಮುದಗಲ್ಲಿನ ಗ್ಯಾನಪ್ಪ ತಾತ, ಟೆಂಗುಂಟಿನ ಭೀಮಪ್ಪಯ್ಯ ಗ್ಯಾನಪ್ಪಯ್ಯನಮಠ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಂಗಣ್ಣ ಸಮಗಂಡಿ, ವೀರೇಶ ನಾಗಪ್ಪ ಸಾಲೋಣಿ, ಎಪಿಎಂಸಿ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ನಿರ್ದೇಶಕರಾದ ರುದ್ರೇಶ ಡ್ಯಾಗಿ, ರಾಜಸಾಬ ಎಲಿಗಾರ, ಮೈಲಾರಪ್ಪ ನಾಗಲಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜೆಡಿಎಸ್ ಗಂಗಾವತಿ ನಗರ ಘಟಕದ ಅಧ್ಯಕ್ಷ ಯಮನಪ್ಪ ವಿಠಲಾಪುರ, ಎಪಿಎಂಸಿ ಮಾಜಿ ನಿರ್ದೇಶಕ ನಾಗಪ್ಪ ಹುಗ್ಗಿ, ಪ್ರಮುಖರಾದ ರಾಜಸಾಬ ನಂದಾಪುರ, ನಾಗಲಿಂಗಪ್ಪ ಕರಡಿ, ನಜೀರಸಾಬ ಗೊರಳ್ಳಿ, ಹನುಮನಗೌಡ ದಳಪತಿ, ಗುಡದನಗೌಡ ಪಾಟೀಲ, ವೆಂಕಟೇಶ, ಉಡುಚಪ್ಪ ಭಜಂತ್ರಿ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಸತ್ಯಪ್ಪ ಬೋವಿ, ಗ್ರಾಪಂ ಸದಸ್ಯರಾದ ಬೆಟ್ಟಪ್ಪ ಜೀರಾಳ, ಶಾಮಣ್ಣನಾಯಕ, ಎಸ್ಡಿಎಂಸಿ ಅಧ್ಯಕ್ಷ ಸೋಮನಗೌಡ ಪಾಟೀಲ ಸೇರಿದಂತೆ ಗಣ್ಯರು ಇದ್ದರು.
ಇದಕ್ಕೂ ಪೂರ್ವದಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು, ಮಹಿಳೆಯರು ಕನ್ನಡಿ ಕಳಸದೊಂದಿಗೆ ಭಾಗವಹಿಸಿದ್ದರು. ಡೊಳ್ಳು ಕುಣಿತ, ಸ್ತಬ್ಧಚಿತ್ರಗಳ ಮೆರವಣಿಗೆ ಆಕರ್ಷಣೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.