ಕೊಟ್ಟೂರು: ದಲಿತರಲ್ಲಿ ಪರಿಶಿಷ್ಟರಿಗೆ ನಿಜವಾದ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಉಜ್ಜಿನಿ ಸದ್ಧರ್ಮ ಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ ಹೇಳಿದರು.
ಇಲ್ಲಿಗೆ ಸಮೀಪದ ಹರಾಳು ಗ್ರಾಮದಲ್ಲಿ ನೂತನ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟರು ಹೋರಾಟ ನಡೆಸಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾಜಸೇವಕ ಹರಾಳು ಅಶೋಕ, ದಲಿತರಲ್ಲಿ ಮೊದಲು ಶಿಕ್ಷಣದ ಬಗ್ಗೆ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ದಲಿತ ಮುಖಂಡ ತಗ್ಗಿನಕೆರೆ ಕೊಟ್ರೇಶ, ಅಂಬೇಡ್ಕರ್ ಅವರ ಬದುಕು ಮತ್ತು ಹೋರಾಟದ ವಿವರವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಾಳು ನಂಜಪ್ಪ, ದಲಿತರ ಹಕ್ಕೊತ್ತಾಯದ ಹೋರಾಟಗಳಿಗೆ ಸದಾ ನಮ್ಮ ಬೆಂಬಲವಿರುತ್ತದೆ ಎಂದರು.
ಗುಡೇಕೋಟೆ ರಾಜಣ್ಣ ಸಭೆ ಕುರಿತು ಮಾತನಾಡಿದರು. ಇಟಗಿ ಅಜ್ಜಪ್ಪ ಕ್ರಾಂತಿಗೀತೆ ಹಾಡಿದರು. ಗ್ರಾ.ಪಂ. ಸದಸ್ಯರಾದ ಅರಸಿಕೇರೆ ಬಸವರಾಜ್, ಕಂದಗಲ್ಲು ಪರಶುರಾಮ್, ಹ್ಯಾಳ್ಯಾ ಶಿವಪ್ಪ, ಅಮರೇಶ್, ತಿಮ್ಮಣ್ಣ ಮುಂತಾದವರು ಇದ್ದರು.
ವಕೀಲ ಟಿ. ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.