ಸೊರಬ: ಗ್ರಾಮ ಹಿತಾಸಕ್ತಿ, ಅಭಿವೃದ್ಧಿಗಿಂತ ಪಕ್ಷ ಸಂಘಟನೆ ಮುಖ್ಯ ಅಲ್ಲ. ಗ್ರಾಮದ ಅಭಿವೃದ್ಧಿಯ ಭರವಸೆ ನೀಡಿ ಮತ ಪಡೆದ ಜನಪ್ರತಿನಿಧಿ ತನ್ನ ಗ್ರಾಮದ ಸಮಸ್ಯೆಗೆ ಮೊದಲು ಸ್ಪಂದಿಸಬೇಕು ಎಂದು ಗೆಂಡ್ಲ ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ ಸಲಹೆ ನೀಡಿದರು.
ಶಿಡ್ಡಿಹಳ್ಳಿ ಗ್ರಾಮದಲ್ಲಿ ಈಚೆಗೆ ಸ್ಥಳೀಯ ಸರ್ಕಾರಿ ಕಿ.ಪ್ರಾ. ಶಾಲೆಯ ಸಂಸ್ಥಾಪಕ, ನಿವೃತ್ತ ಶಿಕ್ಷಕ ಮಹೇಶ್ವರಪ್ಪ ಅವರಿಗೆ ಗ್ರಾಮಸ್ಥರ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
60ರ ದಶಕದಲ್ಲಿ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡು, ಉತ್ತಮ ಅಡಿಪಾಯ ಹಾಕುವ ಮೂಲಕ ಕುಗ್ರಾಮ ಒಂದರ ಶೈಕ್ಷಣಿಕ ಪ್ರಗತಿಗೆ ಮಹೇಶ್ವರಪ್ಪ ಕಾರಣ ಆಗಿದ್ದಾರೆ ಎಂದು ಶ್ಲಾಘಿಸಿದ ಅವರು, ಶಾಲೆ ಗಣನೀಯವಾಗಿ ಇನ್ನೂ ಪ್ರಗತಿ ಸಾಧಿಸಿಲ್ಲ ಎಂದು ವಿಷಾದಿಸಿದರು.
ಗ್ರಾಮಸ್ಥರ ಸಹಕಾರಕ್ಕೆ ಮನವಿ ಮಾಡಿದರು.ಗ್ರಾಮಸ್ಥರು ಮಹೇಶ್ವರಪ್ಪ ದಂಪತಿಯನ್ನು ಹೃದಯ ಪೂರ್ವಕವಾಗಿ ಸನ್ಮಾನಿಸಿದರು.ಎಸ್ಡಿಎಂಸಿ ಅಧ್ಯಕ್ಷ ರಾಜಾಸಾಬ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ನಿವೇಶನ ದಾನಿ ಚಂದ್ರೇಗೌಡ, ಮುಖ್ಯ ಶಿಕ್ಷಕ ಎಂ.ಎಂ. ಅತ್ತಿಕಟಗಿ, ಸುಬ್ಬಪ್ಪಗೌಡ, ನಾಗಪ್ಪ ಯಳಗೇರಿ, ರುದ್ರಪ್ಪ, ಮುನೀರ್ಸಾಬ್, ಅಜೀಜ್ಸಾಬ್, ನಿಂಗೇಗೌಡ, ಹುಸೇನ್, ನಾಗಪ್ಪ, ಬಸಪ್ಪಗೌಡ, ದೇವೇಂದ್ರಪ್ಪ, ಮಲ್ಲೇಶಪ್ಪ, ಪರಶುರಾಮ್ ಇತರರು ಹಾಜರಿದ್ದರು. ಕೃಷ್ಣಾಚಾರ್ ಪ್ರಾರ್ಥಿಸಿದರು. ಬಸಪ್ಪ ಮಾವಿನತೋಪು ವಂದಿಸಿದರು.