ಬೆಂಗಳೂರು: ಶಿವಮೊಗ್ಗ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ (ಶಿಮುಲ್) 103 ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಒಕ್ಕೂಟದ ನಿರ್ದೇಶಕ ಜಿ.ಪಿ.ರೇವಣಸಿದ್ದಪ್ಪ ಮನೆ ಮತ್ತು ಕಚೇರಿಗಳ ಮೇಲೆ ಶನಿವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ನಗದು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
‘ಚಿತ್ರದುರ್ಗ ಜಿಲ್ಲೆ ಓಬವ್ವ ನಾಗತಿಹಳ್ಳಿಯಲ್ಲಿರುವ ರೇವಣಸಿದ್ದಪ್ಪ ಅವರ ಮನೆ, ಚಿಕ್ಕಬೆನ್ನೂರಿನಲ್ಲಿರುವ ಸಂಬಂಧಿಕರ ಎರಡು ಮನೆಗಳು ಹಾಗೂ ಶಿವಮೊಗ್ಗದಲ್ಲಿರುವ ಶಿಮುಲ್ ಕಚೇರಿ ಮೇಲೆ ಶನಿವಾರ ಏಕಕಾಲಕ್ಕೆ ದಾಳಿ ನಡೆಯಿತು. ಆರೋಪಿಯ ಮನೆಯಲ್ಲಿ ₨ 25,750 ನಗದು ಮತ್ತು ಎರಡು ಬ್ಯಾಂಕ್ ಲಾಕರುಗಳ ಕೀ ದೊರೆತಿವೆ. ಅವರ ಪತ್ನಿ ಬಿ.ಕೆ.ಕಲ್ಪನಾ ಬ್ಯಾಂಕ್ ಲಾಕರಿನಲ್ಲಿ ರೂ.11.50 ಲಕ್ಷ ನಗದು ಪತ್ತೆಯಾಗಿದೆ’ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದರು.
ಸಂದರ್ಶನದ ದಾಖಲೆಗಳು ಮನೆಯಲ್ಲಿ: ನೇಮಕಾತಿಯ ಸಂದರ್ಶನಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ರೇವಣಸಿದ್ದಪ್ಪ ಅವರ ಮನೆಯಲ್ಲಿ ಪತ್ತೆಯಾಗಿವೆ. ಕೆಲವು ಅಭ್ಯರ್ಥಿಗಳ ಮೌಖಿಕ ಸಂದರ್ಶನ ಪತ್ರಗಳೂ ದೊರೆತಿವೆ.
‘ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯೊಂದು ಆರೋಪಿಯ ಮನೆಯಲ್ಲಿ ಲಭ್ಯವಾಗಿದೆ. ಆ ಪಟ್ಟಿಯಲ್ಲಿ ಕೆಲ ಅಭ್ಯರ್ಥಿಗಳ ಹೆಸರಿನ ಮುಂದೆ ಅಂಕಿಗಳು ಮತ್ತು ಸಂಕೇತಗಳನ್ನು ನಮೂದಿಸಿರುವುದು ಕಂಡುಬಂದಿದೆ. ಯಾವ ಉದ್ದೇಶಕ್ಕಾಗಿ ಆ ರೀತಿ ಮಾಡಲಾಗಿತ್ತು ಎಂಬುದರ ಕುರಿತು ಆರೋಪಿಯನ್ನು ಪ್ರಶ್ನಿಸಲಾಗುತ್ತಿದೆ’ ಎಂದು ರಾವ್ ತಿಳಿಸಿದರು.