ಬೆಂಗಳೂರು: ಸಕಲೇಶಪುರ– ಗುಂಡ್ಯ ನಡುವಿನ ಶಿರಾಡಿಘಾಟ್ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರ ರೂ95 ಕೋಟಿ ಬಿಡುಗಡೆ ಮಾಡಿದೆ. ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪತಿಳಿಸಿದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ –2ರ ಅಡಿ 3,745 ಕಿ.ಮೀ. ಉದ್ದದ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಇದೇ 26ರಂದು ಚಾಲನೆ ನೀಡಲಾಗುವುದು ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರೂ1500 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಡಾಂಬರೀಕರಣ, ರಸ್ತೆ ವಿಸ್ತರಣೆಗೆ ಇದರಲ್ಲಿ ಅವಕಾಶ ಇದೆ. ವಿವಿಧ ಯೋಜನೆಗಳ ಅಡಿ ಮಾರ್ಚ್ ವೇಳೆಗೆ 5500– 6000 ಕಿ.ಮೀ. ರಸ್ತೆ ಅಭಿ ವೃದ್ಧಿಪಡಿಸಲಾಗುವುದು. ಕೇಂದ್ರ ರಸ್ತೆ ನಿಧಿಯಡಿ ಕೇಂದ್ರ ಸರ್ಕಾರ ರೂ1800 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳ ದುರಸ್ತಿಗೆ ಬಳಸಲಾಗುವುದು ಎಂದರು.
ಕೋಯಿಕ್ಕೋಡ್ – ಗುಂಡ್ಲುಪೇಟೆ, ಗುಂಡ್ಲುಪೇಟೆ–ಕೊಳ್ಳೆಗಾಲ, ಮೈಸೂರು –ನಂಜನಗೂಡು, ಮೈಸೂರು– ಟಿ.ನರ ಸೀಪುರ (ಎನ್.ಎಚ್.212) ಮಾರ್ಗದ 151 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕೇಂದ್ರ ಮಂಜೂರಾತಿ ನೀಡಿದ್ದು, ಇದೇ 30ರಂದು ಟೆಂಡರ್ ಕರೆಯಲಾ ಗುವುದು.ಯೋಜನೆಗೆ ರೂ524 ಕೋಟಿ ವೆಚ್ಚವಾಗಲಿದೆ ಎಂದರು.
ಚಿತ್ರದುರ್ಗ – ಶಿವಮೊಗ್ಗ ಮಾರ್ಗದ (ಎನ್.ಎಚ್ –13) 102 ಕಿ.ಮೀ. ರಸ್ತೆ ಅಭಿವೃದ್ಧಿಗೆ ₨326.90 ಕೋಟಿ ವೆಚ್ಚವಾಗಲಿದೆ. ಇದೇ 26ರಂದು ಟೆಂಡರ್ ಕರೆಯಲಾಗುವುದು ಎಂದರು.
ಕೆಶಿಪ್– 2ರ ಅಡಿ ಶಿಕಾರಿಪುರ – ಶಿವಮೊಗ್ಗ – ಹಾನಗಲ್ ನಡುವಿನ 108 ಕಿ.ಮೀ. ರಸ್ತೆಯನ್ನು ₨397 ಕೋಟಿ ವೆಚ್ಚದಲ್ಲಿ, ವಿಜಾಪುರ – ದೇವಪುರ ನಡುವಿನ 109 ಕಿ.ಮೀ. ರಸ್ತೆಯನ್ನು ₨250 ಕೋಟಿ ವೆಚ್ಚದಲ್ಲಿ, ಮಳವಳ್ಳಿ – ತುಮಕೂರು– ಮಧುಗಿರಿ– ಪಾವಗಡ ನಡುವಿನ 200 ಕಿ.ಮೀ. ರಸ್ತೆಯನ್ನು ₨560 ಕೋಟಿ ವೆಚ್ಚದಲ್ಲಿ, ನಿಪ್ಪಾಣಿ – ಮುಧೋಳ ನಡುವಿನ 108 ಕಿ.ಮೀ. ರಸ್ತೆಯನ್ನು ₨320 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮರು ಟೆಂಡರ್ ಕರೆಯಲಾಗುವುದು ಎಂದರು.
ರಸ್ತೆ ಬಳಕೆ ಶುಲ್ಕ ಸಂಗ್ರಹಿಸುವುದು ನಿರ್ವಹಣೆ ದೃಷ್ಟಿಯಿಂದ ಒಳ್ಳೆಯದು. ಹಿಂದಿನ ಸರ್ಕಾರ ಈ ಬಗ್ಗೆ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಪ್ಪು ಮಾಡಿಲ್ಲ: ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಚಿಕ್ಕರಾ ಯಪ್ಪ ತಪ್ಪು ಮಾಡಿಲ್ಲ ಎಂದು ಹೈಕೋರ್ಟ್ ‘ಕ್ಲಿನ್ ಚೀಟ್’ ನೀಡಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.