ನವದೆಹಲಿ (ಪಿಟಿಐ): ಭ್ರಷ್ಟಾಚಾರ ಅಥವಾ ಸರ್ಕಾರಿ ನೌಕರರು ಮತ್ತು ಸಚಿವರು ಉದ್ದೇಶಪೂರ್ವಕವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸುವವರಿಗೆ ರಕ್ಷಣೆ ನೀಡುವ ಕುರಿತ `ಶಿಳ್ಳೆಗಾರರ ರಕ್ಷಣಾ ಮಸೂದೆ-2011~ ಯನ್ನು ರಾಜ್ಯಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ.
ಲೋಕಸಭೆ ಈಗಾಗಲೇ ಅಂಗೀಕಾರವಾಗಿರುವ ಈ ಮಸೂದೆಯನ್ನು ಕೆಲವು ಸಣ್ಣಪುಟ್ಟ ತಿದ್ದುಪಡಿಗಳನ್ನು ಸೂಚಿಸಿ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಚಿವ ವಿ. ನಾರಾಯಣಸ್ವಾಮಿ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು.
ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಮತ್ತು ದೇಶದ ಏಕತೆಗೆ ಸಂಬಂಧಿಸಿದ ವಿಷಯಗಳನ್ನು ಈ ಮಸೂದೆ ವ್ಯಾಪ್ತಿಯಿಂದ ಹೊರಗಿಡುವ ತಿದ್ದುಪಡಿಯನ್ನು ಇದು ಒಳಗೊಂಡಿದೆ.
ರಕ್ಷಣಾ ಪಡೆ ಮತ್ತು ಬೇಹುಗಾರಿಕೆ ವಿಭಾಗದಲ್ಲಿನ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಈ ಮಸೂದೆ ಒಳಗೊಂಡಿದೆ ಎಂದು ಅವರು ಹೇಳಿದರು.