ಹಳೇಬೀಡು: ಸಮೀಪದ ಶಿವನೇನಹಳ್ಳಿ ಕೆರೆಯಲ್ಲಿ ಮಂಗಳವಾರ ಮೀನುಗಳು ನಿಗೂಢವಾಗಿ ಸಾವನ್ನಪ್ಪಿವೆ. ಸತ್ತ ಮೀನುಗಳು ಕೆರೆ ದಡಕ್ಕೆ ಬಂದು ಬೀಳುತ್ತಿದ್ದು, ಸುತ್ತಲೂ ದುರ್ವಾಸನೆ ಹರಡಿದೆ.
ಗ್ರಾ.ಪಂ ವ್ಯಾಪ್ತಿಯ ಕೆರೆಯಲ್ಲಿ ಮೀನು ಮರಿ ಬಿಟ್ಟಿರಲಿಲ್ಲ. ಆದರೂ ಕೆರೆಗೆ ಹಳ್ಳದ ನೀರು ಬಂದಾಗ ಮೀನುಗಳೂ ಬಂದು ಸೇರಿದ್ದವು. ಮೀನುಗಳ ಸಾವಿನ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೂ ಅನುಮಾನಕ್ಕೆ ಎಡೆಮಾಡಿದೆ.
`ಕೆರೆ ನೀರಿಗೆ ಕ್ರೀಮಿನಾಶಕ ಹಾಕುವುದು ಸುಲಭದ ಮಾತಲ್ಲ. ನೀರಿಗೆ ವಿಷ ಮಿಶ್ರಣವಾಗಲು ಸಾಧ್ಯವಿಲ್ಲ. ಮೀನುಗಾರಿಕೆ ಇಲಾಖೆಗೆ ವಿಷಯ ತಿಳಿಸಲಾಗಿದೆ. ನೀರು ಹಾಗೂ ಸತ್ತಿರುವ ಮೀನಿನ ಪರೀಕ್ಷೆಯಿಂದ ಸತ್ಯಾಂಶ ತಿಳಿಯಲಿದೆ~ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
ಕಳೆನಾಶಕ, ಕ್ರಿಮಿನಾಶಕ ಹಾಗೂ ರಸಗೊಬ್ಬರ ಉಪಯೋಗಿಸಿ ಬೆಳೆದ ಶುಂಠಿಯನ್ನು ಕೆರೆ ನೀರಿನಲ್ಲಿ ತೊಳೆಯುವುದರಿಂದಲೂ ಜಲಚರಗಳಿಗೆ ತೊಂದರೆಯಾಗುತ್ತದೆ. ಕಳೆದ ವರ್ಷ ಕೆರೆಯಲ್ಲಿ ಶುಂಠಿ ತೊಳೆಯಲಾಗಿತ್ತು. ಆದರೆ ಈ ವರ್ಷ ತೊಳೆದಿಲ್ಲ ಎನ್ನುತ್ತಾರೆ ಸ್ಥಳೀಯರು. ಮಳೆ ಕಡಿಮೆಯಾಗಿರುವುದರಿಂದ ಹಳ್ಳಗಳಲ್ಲಿ ನೀರು ಹರಿಯುತ್ತಿಲ್ಲ. ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿವೆ.
ಜಾನುವಾರುಗಳಿಗೆ ನೀರು ಕುಡಿಸಲು ಎಲ್ಲಿಗೆ ಹೋಗಬೇಕು ಎನ್ನುವ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ಸತ್ತ ಮೀನುಗಳನ್ನು ಜನರು ಉಪಯೋಗಿಸಬಾರದು. ಸತ್ತಿರುವ ಮೀನುಗಳನ್ನು ದೂರದಲ್ಲಿ ಗುಂಡಿಯಲ್ಲಿ ಹೂಳಬೇಕು. ಜಾನುವಾರುಗಳಿಗೆ ನೀರು ಕುಡಿಸಬಾರದು ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಬೇಕು ಎಂದು ತಾ.ಪಂ., ಗ್ರಾ.ಪಂ ಆದೇಶ ಬಂದಿದೆ ಎಂದು ಮೂಲಗಳು ತಿಳಿಸಿವೆ.