ಮದ್ದೂರು: ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಟದ ಕಿಚ್ಚನ್ನು ಹಚ್ಚಿದ ಶಿವಪುರ ಧ್ವಜ ಸತ್ಯಾಗ್ರಹದ ನೆನಪು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇತಿಹಾಸ ಸಂಶೋಧಕ ಸಾಹಿತಿ ಪ್ರೊ.ಆಲಕೆರೆ ಸಿದ್ದರಾಜು ಅಭಿಪ್ರಾಯಪಟ್ಟರು.
ಸಮೀಪದ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಎಚ್.ಕೆ.ವೀರಣ್ಣಗೌಡ ಕಾಲೇಜು ಹಾಗೂ ಸೌಧ ಉಸ್ತುವಾರಿ ಸಮಿತಿ ಜಂಟಿಯಾಗಿ ಬುಧವಾರ ಆಯೋಜಿಸಿದ್ದ `ಶಿವಪುರ ಧ್ವಜ ಸತ್ಯಾಗ್ರಹದ ಅಮೃತ ಮಹೋತ್ಸವ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಏಪ್ರಿಲ್ 10 ರಂದು ಶಿವಪುರ ಸತ್ಯಾಗ್ರಹದ ನೆನಪಿನ ದಿನವನ್ನು ಸರ್ಕಾರಿ ಕಾರ್ಯಕ್ರಮ ವನ್ನಾಗಿ ರೂಪಿಸಬೇಕು. ಅಲ್ಲದೇ ಪಾಳು ಸೌಧವಾಗಿ ಮಾರ್ಪಟ್ಟಿರುವ ಶಿವಪುರ ಧ್ವಜ ಸತ್ಯಾಗ್ರಹ ಸೌಧವು ಉತ್ತಮ ಪ್ರವಾಸಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸೌಧದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಎಂ.ಎಚ್.ಚನ್ನೇಗೌಡ ವಿದ್ಯಾನಿಲ ಯದ ಸಂಸ್ಥಾಪಕ ಕಾರ್ಯದರ್ಶಿ ಕೆ.ಟಿ.ಚಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಶಿವಪುರ ಧ್ವಜ ಸತ್ಯಾಗ್ರಹ ಅಧಿವೇಶನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮಹತ್ವವಾದ ಸಂಗತಿ. ಇಂತಹ ಸತ್ಯಾಗ್ರಹ ನಡೆದು 75ವರ್ಷಗಳು ಕಳೆದರೂ ಇಂದಿಗೂ ಆ ಹೋರಾಟ ಇಲ್ಲಿನ ಜನರಲ್ಲಿ ತುಂಬಿದ ಆತ್ಮಸ್ಥೈರ್ಯ ನಿಜಕ್ಕೂ ರೋಚಕ ಎಂದು ಬಣ್ಣಿಸಿದರು.
ಧ್ವಜ ಸತ್ಯಾಗ್ರಹ ಸೌಧ ಉಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ಡಾ.ಎಸ್.ಬಿ.ಅಪ್ಪಾಜಿಗೌಡ, ಪ್ರಾಂಶಪಾಲ ಪ್ರೊ.ಸಿದ್ದರಾಜು, ಎನ್ಎಸ್ಎಸ್ ಅಧಿಕಾರಿ ಪ್ರೊ.ಪುಟ್ಟರಾಮು, ಉಪನ್ಯಾಸಕ ಹರೀಶಬಾಬು, ಸಹಾಯಕ ಚನ್ನೇಗೌಡನದೊಡ್ಡಿ ಹರೀಶ್ ಸೇರಿದಂತೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಪಾಲ್ಗೊಂಡಿದ್ದರು.