ಶಿವಮೊಗ್ಗ: ಭಾದ್ರಪದ ತದಿಗೆಯ ಬುಧವಾರದಂದು ನಗರದಾದ್ಯಂತ ಹೆಣ್ಣುಮಕ್ಕಳು ಮುತ್ತೈದೆ ಭಾಗ್ಯವನ್ನು ಕೊಡುವ ವ್ರತದ ಸ್ವರ್ಣಗೌರಿ ಹಬ್ಬವನ್ನು ಮನೆ, ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ಆಚರಿಸಿದರು.
ಫಲ, ಪುಷ್ಪ, ಪತ್ರೆ, ಅರಿಶಿಣ, ಕುಂಕುಮ, ಹದಿನಾರರ ಗೆಜ್ಜೆವಸ್ತ್ರ, ಹತ್ತಿ ಎಳೆಯ ಮಾಲೆ, ತುಳಸಿ ಮಾಲೆ ಗಳಿಂದ ಸ್ವರ್ಣಗೌರಿಯನ್ನು ಶೃಂಗರಿಸ ಲಾಗಿತ್ತು. ನಗರದ ವೀರಶೈವ ಬಸವ ಭವನದಲ್ಲಿ ಸ್ವರ್ಣಗೌರಿಯ ಮಂಟಪ ವನ್ನು ಸುಂದರವಾಗಿ ಅಲಂಕರಿಸಿ, ಬೆಳಿಗ್ಗೆ 5.30ಕ್ಕೆ ಪ್ರತಿಷ್ಠಾಪಿಸುವ ಮೊದಲು ಗಂಗೆ ಪೂಜೆ ಮಾಡಿ ಗಂಗೆ ಯನ್ನು ಕಳಸದಲ್ಲಿ ತುಂಬಿ, ನಂತರ ಸ್ವರ್ಣಗೌರಿ ಪ್ರತಿಷ್ಠಾಪಿಸಲಾಯಿತು.
ಅರಿಶಿಣ-ಕುಂಕುಮ, ವಿಧವಿಧ ಪುಷ್ಪಗಳಿಂದ ಪೂಜಿಸಿ, ಗೆಜ್ಜೆವಸ್ತ್ರ ಏರಿಸಿ ಹದಿನಾರೆಳೆ ದಾರವನ್ನು ಹೂವಿನ ಸಮೇತ ಅಲಂಕೃತಗೊಳಿಸಿ ಪೂಜಿಸಲಾಯಿತು. ನಂತರ ಬಾಗಿನ ನೀಡುವ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ರಾಮಣ್ಣ ಶ್ರೇಷ್ಠಿ ಪಾರ್ಕ್ನ ಸರ್ವ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸ್ವರ್ಣಗೌರಿಯನ್ನು ಶೃಂಗರಿಸಿ, ಬಣ್ಣಬಣ್ಣದ ಗೆಜ್ಜೆವಸ್ತ್ರ ಹಾಗೂ ಮೊರದ ಜತೆಯಲ್ಲಿ ಮಹಿಳೆಯರಿಗೆ ಬಾಗಿನ ನೀಡಿದರು.