ಶಿವಮೊಗ್ಗ: ಬಂದ್ ನಡುವೆಯೂ ಅಧಿಕಾರಿಗಳು ಮತ್ತು ತಮ್ಮ ಆಪ್ತರ ಸಭೆ ನಡೆಸುತ್ತಿದ್ದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನಿವಾಸಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿ, ಪ್ರತಿಭಟಿಸಿದ ಘಟನೆ ಶನಿವಾರ ಬೆಳಿಗ್ಗೆ ನಡೆಯಿತು.
ಇಲ್ಲಿನ ಗುಂಡಪ್ಪಶೆಡ್ನ ಮಲ್ಲೆೀಶ್ವರ ನಗರದ ತಮ್ಮ ನಿವಾಸದಲ್ಲಿ ಈಶ್ವರಪ್ಪ ಅವರು ಸಭೆ ನಡೆಸುತ್ತ್ದ್ದಿದರು. ಆಗ ಅಲ್ಲಿಗೆ ಬಂದ ಪ್ರತಿಭಟನಕಾರರು, ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿ, ಮನೆ ಒಳಕ್ಕೆ ನುಗ್ಗಲು ಯತ್ನಿಸಿದರು.
ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅವರ ಆಕ್ರೋಶ ಮುಂದುವರಿದಾಗ ಈಶ್ವರಪ್ಪ ಹೊರಬಂದು ಮನವಿ ಸ್ವೀಕರಿಸಿ ನೀರು ಬಿಡಬೇಕಾದ ಅನಿವಾರ್ಯತೆ ಮನವರಿಕೆ ಮಾಡಲು ಯತ್ನಿಸಿದರು. ಈಶ್ವರಪ್ಪ ಅವರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಸಂಜಯ್ ಬಿಜ್ಜೂರು, ಹಿರಿಯ ಉಪ ವಿಭಾಗಾಧಿಕಾರಿ ವೈಶಾಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.