ಮೈಸೂರು: ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ ಫೆ. 11ರ ವರೆಗೆ ಜರುಗಲಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಬುಧವಾರ ಅದ್ದೂರಿ ಚಾಲನೆ ದೊರೆಯಿತು.
ಪ್ರಾತಃಕಾಲ 4 ಗಂಟೆಗೆ ಕತೃಗದ್ದುಗೆಗೆ ಮಹಾರುದ್ರಾಭಿಷೇಕ, 6.30 ಗಂಟೆಗೆ ಶಾಂತಿ ಪ್ರಾರ್ಥನಾ ಪಥಸಂಚಲನ ನೆರವೇರಿತು. ಆ ಬಳಿಕ ಮಹಾಮಂಗಳಾರತಿ, ಬೆಳ್ಳಿರಥ ಪ್ರಾಕಾರೋತ್ಸವ, ಅಷ್ಟೋತ್ತರ ಶತಕುಂಭಾಭಿಷೇಕ, ಮಹಾರುದ್ರಾಭಿಷೇಕ, ಮೃತ್ಯುಂಜಯ ಮಹೋತ್ಸವ, ಬಿಲ್ವ ವೃಕ್ಷಪೂಜೆ ನೆರವೇರಿದವು.
ಜಾತ್ರಾ ಮಹೋತ್ಸವದ ಅಂಗವಾಗಿ ಜೆಎಸ್ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ದೇಸಿ ಆಟಗಳು, ಕ್ರಿಕೆಟ್ ಪಂದ್ಯಾವಳಿ ಹಾಗೂ ದೋಣಿ ವಿಹಾರ ಗಮನ ಸೆಳೆದವು. 44 ಪ್ರೌಢಶಾಲೆಗಳ 834 ವಿದ್ಯಾರ್ಥಿಗಳು ದೇಸಿ ಆಟ ಹಾಗೂ ಕ್ರಿಕೆಟ್ನಲ್ಲಿ ಭಾಗವಹಿಸಿದ್ದರು.
ಹರಿದು ಬಂದ ಜನಸಾಗರ: ಸುತ್ತೂರು ಶ್ರೀಮಠವು ಆಯೋಜಿಸಿರುವ ಜಾತ್ರಾ ಮಹೋತ್ಸವಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಹರಕೆ ಹೊತ್ತ ಭಕ್ತರು ಕಪಿಲಾ ನದಿಯಲ್ಲಿ ಮಿಂದು, ದೇವರ ದರ್ಶನ ಪಡೆದು ಪುನೀತರಾದರು. ಕೃಷಿ ಮೇಳ, ವಸ್ತುಪ್ರದರ್ಶನ, ಸಾಂಸ್ಕೃತಿಕ ಮೇಳ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಿಸಿ ಸಂತಸಪಟ್ಟರು.
ಫೆ. 7 ರಂದು ಬೆಳಿಗ್ಗೆ 10.30 ಗಂಟೆಗೆ ಸಾಮೂಹಿಕ ವಿವಾಹ, ಮಧ್ಯಾಹ್ನ 3 ಗಂಟೆಗೆ ರಾಜ್ಯಮಟ್ಟದ 21ನೇ ಭಜನಾಮೇಳ, ಫೆ. 8ರಂದು ರಥೋತ್ಸವ, ಧಾರ್ಮಿಕ ಸಭೆ ಹಾಗೂ 46ನೇ ದನಗಳ ಜಾತ್ರೆ, ಫೆ. 9 ರಂದು ಕೃಷಿ ಸಂವಾದ, 10 ರಂದು ರಾಜ್ಯಮಟ್ಟದ ಮಕ್ಕಳ ಚಿತ್ರಕಲೆ ಸ್ಪರ್ಧೆ, ಗಾಳಿಪಟ ಹಾಗೂ ಮಹಿಳೆಯರಿಗಾಗಿ ದೀಪಾಲಂಕಾರ, ಕುಸ್ತಿ ಪಂದ್ಯಾವಳಿ ಜರುಗಲಿವೆ.