ಬೆಂಗಳೂರು: `ಅಂಚೆ ಇಲಾಖೆಯು ಶಿವರಾತ್ರೀಶ್ವರ ಶಿವಯೋಗಿಗಳವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಹೊರತರುತ್ತಿದೆ' ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಇದೇ ಡಿ. 21 ರಂದು ಶುಕ್ರವಾರ ಬೆಳಿಗ್ಗೆ 10 ಕ್ಕೆ ನಗರದ ಬನಶಂಕರಿ 2 ನೇ ಹಂತದಲ್ಲಿರುವ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಶಿವಯೋಗಿಗಳವರ ಅಂಚೆಚೀಟಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಶಾಲೆ ಆವರಣದಲ್ಲಿ ನಿರ್ಮಿಸಿರುವ ಶಿವಯೋಗಿ ಸಭಾಭವನದ ಉದ್ಘಾಟನೆಯು ನಡೆಯಲಿದೆ' ಎಂದು ವಿವರಿಸಿದರು.
`ಐದು ರೂಪಾಯಿ ಮುಖಬೆಲೆಯಿರುವ ಅಂಚೆ ಚೀಟಿಯು ಇದಾಗಿದೆ. ಅಂಚೆಚೀಟಿಯು ಬಿಡುಗಡೆಯಾದ ನಂತರ ದೇಶದ ಎಲ್ಲಾ ರಾಜ್ಯಗಳ 1100 ಅಂಚೆ ಕಚೇರಿಗಳಲ್ಲಿ ಈ ವಿಶೇಷ ಅಂಚೆಚೀಟಿಯು ಮಾರಾಟಕ್ಕೆ ಲಭ್ಯವಿರುತ್ತದೆ' ಎಂದರು.