ಪಟ್ನಾ: ರಾಷ್ಟ್ರಪತಿಗಳ ಹೆಸರಿನ ಮೊದಲು ಹಲವು ದಶಕಗಳಿಂದ ಬಳಸುತ್ತಾ ಬಂದಿರುವ `ಗೌರವಾನ್ವಿತ~, `ಘನವೆತ್ತ~ ಮುಂತಾದ ಗೌರವ ಸೂಚಕ ಶಿಷ್ಟಾಚಾರದ ಪದಗಳನ್ನು ಬಳಸದಂತೆ ನೂತನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೂಚಿಸಿದ್ದಾರೆ.
ಇಲ್ಲಿಯ ನಾಗೇಂದ್ರ ಝಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಬಿಹಾರದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಣವ್ ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ರಾಷ್ಟ್ರಪತಿಯವರನ್ನು ಈ ವಿಶೇಷಣಗಳಿಂದ ಸಂಬೋಧಿಸದಂತೆ ರಾಷ್ಟ್ರಪತಿ ಭವನವು ವಿಶ್ವವಿದ್ಯಾಲಯ ಆಡಳಿತಕ್ಕೆ ಪತ್ರ ಬರೆದಿದೆ.
ರಾಷ್ಟ್ರಪತಿಯವರ ಈ ಇಂಗಿತಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ವಿಶ್ವವಿದ್ಯಾಲಯವು ಘಟಿಕೋತ್ಸವದ ಆಮಂತ್ರಣ ಪತ್ರಿಕೆಗಳ ಮರು ಮುದ್ರಣಕ್ಕೆ ಮುಂದಾಗಿದೆ.
ಸಮಾರಂಭದ ವೇದಿಕೆಯ ಆಸನದಲ್ಲೂ ವ್ಯಕ್ತಿಗತ ಹೆಸರುಗಳ ಬದಲು ಕೇವಲ `ರಾಷ್ಟ್ರಪತಿ~ ಎಂಬ ಹುದ್ದೆ ಸೂಚಕ ಫಲಕ ಹಾಕಲು ಸೂಚಿಸಲಾಗಿದೆ. ಜತೆಗೆ ವೇದಿಕೆಯಲ್ಲಿ ರಾಷ್ಟ್ರಪತಿ ಸೇರಿದಂತೆ ಎಲ್ಲ ಅತಿಥಿಗಳಿಗೂ ಒಂದೇ ತೆರನಾದ ಕುರ್ಚಿಗಳನ್ನು ಹಾಕುವಂತೆ ರಾಷ್ಟ್ರಪತಿ ಭವನ ಸೂಚನೆ ನೀಡಿದೆ.