ವಿಟ್ಲ: ಬದುಕಿನಲ್ಲಿ ನಿರ್ದಿಷ್ಟವಾದ ಶಿಸ್ತನ್ನು ರೂಪಿಸಿಕೊಂಡಾಗ ಮುನ್ನಡೆ ಸಾಧಿಸಬಹುದು ಎಂದು ಪುತ್ತೂರು ಶಾಸಕಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಟಿ.ಶಕುಂತಳಾ ಶೆಟ್ಟಿ ಹೇಳಿದರು.
ವಿಟ್ಲದ ಅಕ್ಷಯ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದಿಂದ, ಪೊಲೀಸರಿಂದ ಬುದ್ಧಿವಾದ ಹೇಳಿಸಿಕೊಳ್ಳುವ ಹಂತಕ್ಕೆ ಹೋಗಲೇಬಾರದು ಎಂದರು. ಉಪ್ಪಿನಂಗಡಿ ಕಾಲೇಜಿನ ರಂಜಿತ್ ಒಂದು ತಿಂಗಳ ಕಾಲ ಜೈಲಿನಲ್ಲಿದ್ದಾಗ ಮೆರವಣಿಗೆ ಹೋದವರು ಆತ ಬಿಡುಗಡೆಯಾದಾಗ ಒಬ್ಬರೂ ಕೂಡಾ ಜತೆಯಲ್ಲಿರಲಿಲ್ಲ. ಆತ ಏಕಾಂಗಿಯಾಗಿದ್ದ. ರಾಜಕೀಯ ಪ್ರೇರಿತರಾಗಿ ಡೌನ್ ಡೌನ್ ಎಂದು ಘೋಷಣೆಗಳನ್ನು ಕೂಗಿದವರು ಡೌನ್ ಆಗಿದ್ದು ಹೊರತು ಯಾವುದೇ ಪ್ರಯೋಜನವಾಗಲಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಝೇವಿಯರ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಕಾಲೇಜು ಸಾಂಸ್ಕೃತಿಕ ಸಂಘದ ಸಂಚಾಲಕಿ ಚಕ್ರೇಶ್ವರಿ, ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಮಮತಾ ಕೆ.ಎಂ., ಕ್ರೀಡಾ ಸಂಘದ ಪ್ರಧಾನ ಕಾರ್ಯದರ್ಶಿ ಉಷಾ ವಿ. ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರೊ.ಗಿರಿಧರ ರಾವ್ ಸ್ವಾಗತಿಸಿದರು. ಕ್ರೀಡಾ ಸಂಘದ ಸಂಚಾಲಕ ರಾಮಚಂದ್ರ ಕೆ. ವಂದಿಸಿದರು. ಪ್ರೊ.ಶಂಕರ ಭಟ್ ನಿರೂಪಿಸಿದರು.
ಹೆಚ್ಚುವರಿ ಎಸ್ಪಿ ಭೇಟಿ: ಕಾಲೇಜಿನಲ್ಲಿ ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಜೆ ಜಿಲ್ಲಾ ಹೆಚ್ಚುವರಿ ಎಸ್ಪಿ ಶಿವಕುಮಾರ್ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪೊಲೀಸ್ ಇಲಾಖೆಗೆ ವಿದ್ಯಾರ್ಥಿಗಳ ಪುಂಡಾಟಿಕೆ ನಿಲ್ಲಿಸಲು 24 ಗಂಟೆಯೂ ಬೇಡ, ಅವರ ಭವಿಷ್ಯದ ಬಗ್ಗೆ ಚಿಂತಿಸಿ ಅವರಿಗೆ ಬುದ್ಧಿವಾದ ಹೇಳಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಸೋಡಾ ಬಾಟಲಿ ಹಾಗೂ ದೊಣ್ಣೆ ಹಿಡಿದು ಗಲಭೆಯಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಈ ಕಾಲೇಜಿನಲ್ಲಿ ಮುಂದೆ ಗಲಭೆ, ಗುಂಪುಗಾರಿಕೆ ನಡೆದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಬಂಟ್ವಾಳ ವೃತ್ತ ನಿರೀಕ್ಷಕ ಅನಿಲ್ ಎಸ್ ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.