ಬೆಂಗಳೂರು: `ಬೇರೊಬ್ಬ ಯುವತಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಪತಿಯ ವಿರುದ್ಧ ದೂರು ಕೊಟ್ಟಿದ್ದರೂ ಸಂಜಯನಗರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ~ ಎಂದು ಚಿತ್ರ ನಟ ಪ್ರಶಾಂತ್ ಅವರ ಪತ್ನಿ ಶಶಿರೇಖಾ ಅವರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ಕುಮಾರ್ ಅವರಿಗೆ ಬುಧವಾರ ದೂರು ನೀಡಿದ್ದಾರೆ.
ಪತಿ ಬೇರೆ ಯುವತಿಯ ಜತೆ ಸಂಜಯನಗರದ ಅಪಾರ್ಟ್ಮೆಂಟ್ನಲ್ಲಿ ಇದ್ದಾಗಲೇ ಸಂಜಯನಗರ ಪೊಲೀಸರನ್ನು ಅಲ್ಲಿಗೆ ಕರೆದೊಯ್ದು ಹಿಡಿದು ಕೊಟ್ಟಿದ್ದೆ. ಪತಿಯನ್ನು ಠಾಣೆಗೆ ಕರೆದೊಯ್ದ ಪೊಲೀಸರು ಅವರನ್ನು ಬಂಧಿಸದೆ ಸ್ವಲ್ಪ ಸಮಯದಲ್ಲೇ ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
`ಪ್ರಶಾಂತ್ ಅವರನ್ನು ಬಿಟ್ಟು ಕಳುಹಿಸಿದ ಪೊಲೀಸರೇ ಈಗ ಪತಿಯ ಬಗ್ಗೆ ಮಾಹಿತಿ ನೀಡುವಂತೆ ನನಗೆ ಕೇಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪತಿಯನ್ನು ಕೂಡಲೇ ಬಂಧಿಸುವಂತೆ ಸಂಜಯನಗರ ಪೊಲೀಸರಿಗೆ ಸೂಚನೆ ನೀಡಬೇಕೆಂದು ಸುನಿಲ್ಕುಮಾರ್ ಅವರಿಗೆ ಮನವಿ ಮಾಡಿದ್ದೇನೆ. ಪತಿಯ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸುವುದಾಗಿ ಸುನಿಲ್ಕುಮಾರ್ ಅವರು ಭರವಸೆ ನೀಡಿದ್ದಾರೆ~ ಎಂದು ಶಶಿರೇಖಾ `ಪ್ರಜಾವಾಣಿ~ ಗೆ ತಿಳಿಸಿದರು.