ಧಾರವಾಡ: ಆರು ತಿಂಗಳಿಂದ ಖಾಲಿ ಇರುವ ಧಾರವಾಡ, ಶಿವಮೊಗ್ಗ ಹಾಗೂ ಆರಂಭಗೊಳ್ಳಲಿರುವ ಗುಲ್ಬರ್ಗ ರಂಗಾಯಣ ಘಟಕಗಳಿಗೆ ಸಂಭವನೀಯ ನಿರ್ದೇಶಕರ ಪಟ್ಟಿಯನ್ನು ‘ರಂಗಸಮಾಜ’ವು ಸಿದ್ಧಪಡಿಸಿದ್ದು ಇದೇ 7ರಂದು ಸರ್ಕಾರಕ್ಕೆ ಸಲ್ಲಿಸಿದೆ. ವಾರದ ಒಳಗೆ ಈ ಮೂರೂ ರಂಗಾಯಣ ಘಟಕಗಳಿಗೆ ನಿರ್ದೇಶಕರ ನೇಮಕವಾಗುವ ಸಂಭವವಿದೆ.
ಧಾರವಾಡ ರಂಗಾಯಣಕ್ಕೆ ಮೂವರ ಹೆಸರು, ಶಿವಮೊಗ್ಗ ಹಾಗೂ ಗುಲ್ಬರ್ಗ ಘಟಕಗಳಿಗೆ ತಲಾ ನಾಲ್ಕು ಮಂದಿ ಹೆಸರುಗಳನ್ನು ಸೂಚಿಸಲಾಗಿದೆ.
ಹಿರಿಯ ರಂಗ ಕಲಾವಿದರಾದ ಗೋಪಾಲಕೃಷ್ಣ ನಾಯರಿ, ಪ್ರಕಾಶ ಗರೂಡ ಹಾಗೂ ರಂಗಕರ್ಮಿ ವಿಠ್ಠಲ ಕೊಪ್ಪದ ಹೆಸರುಗಳನ್ನು ಸುಭಾಸ ನರೇಂದ್ರ ಅವರಿಂದ ತೆರವಾದ ಧಾರವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಸೂಚಿಸಿದ್ದರೆ ಹೊ.ನ.ಸತ್ಯ ಅವರಿಂದ ತೆರವಾದ ಶಿವಮೊಗ್ಗ ರಂಗಾಯಣಕ್ಕೆ ಇಕ್ಬಾಲ್ ಅಹಮದ್, ಎಸ್.ಮಾಲತಿ, ಪ್ರಮೋದ ಶಿಗ್ಗಾಂವ, ಎಂ.ಗಣೇಶ ಅವರನ್ನು ಹೆಸರಿಸಿದೆ. ಗುಲ್ಬರ್ಗ ರಂಗಾಯಣಕ್ಕೆ ಆರ್.ಕೆ.ಹುಡುಗಿ, ಎಲ್.ಬಿ.ಕೆ.ಅಲ್ದಾಳ, ಪ್ರಭಾಕರ ಸಾತಖೇಡ ಹಾಗೂ ಶಂಕ್ರಯ್ಯ ಘಂಟಿ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಂಗಸಮಾಜದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರಸ್ತುತ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದು, ಉತ್ಸವ ಮುಗಿದ ಬಳಿಕವೇ ಮೂರು ರಂಗಾಯಣ ಘಟಕಕ್ಕೆ ನೂತನ ನಿರ್ದೇಶಕರ ಆಯ್ಕೆ ನಡೆಯಲಿದೆ. ಒಂದು ವಾರದಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿಯಬಹುದು ಎಂದು ತಿಳಿದುಬಂದಿದೆ.
ಪ್ರತಿಭಟನೆಯ ಎಚ್ಚರಿಕೆ: ಹಿಂದೆ ಬಿಜೆಪಿ ಸರ್ಕಾರವು ರಂಗಸಮಾಜ ಸೂಚಿಸಿದ ಹೆಸರುಗಳಿಗೆ ಬೆಲೆ ನೀಡದೇ, ತಮಗೆ ಬೇಕಾದವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಿತ್ತು. ಧಾರವಾಡ ರಂಗಾಯಣಕ್ಕೆ ಸುಭಾಸ ನರೇಂದ್ರ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಗೋಪಾಲಕೃಷ್ಣ ನಾಯರಿ, ಗಂಗಾಧರ ಸ್ವಾಮಿ ಹಾಗೂ ಪ್ರಕಾಶ ಗರೂಡ ಕೋರ್ಟ್ ಮೆಟ್ಟಿಲು ಏರಿದ್ದರು. ‘ಸಮಾಜ ಸೂಚಿಸಿದವರನ್ನು ಹೊರತುಪಡಿಸಿ ಬೇರೆಯವರನ್ನು ನೇಮಕ ಮಾಡಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲೂ ನಾವು ಹಿಂಜರಿಯುವುದಿಲ್ಲ’ ಎಂದು ರಂಗಸಮಾಜದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.