ನವದೆಹಲಿ: ಕಾಂಗ್ರೆಸ್ನಲ್ಲಿರುವ ಜನರ ಧ್ವನಿಯನ್ನು ಬಿಂಬಿಸುವ ರೀತಿಯಲ್ಲಿ ಹೊಸ ಪ್ರಕ್ರಿಯೆ ಮೂಲಕ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬೇಗನೆ ಬಿಡುಗಡೆ ಮಾಡಲಾಗುವುದು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
‘ಹೊಸ ಪ್ರಕ್ರಿಯೆಯ ಮೂಲಕ ಹೊಸ ವಿಧಾನದಲ್ಲಿ ಟಿಕೆಟ್ ಹಂಚಿಕೆ ಮಾಡಲು ನಾವು ನಿರ್ಧಾರ ಮಾಡಿದ್ದೇವೆ. ಬಹಳ ಕಾಲದಿಂದ ಪಕ್ಷದ ವಿವಿಧ ರಾಜ್ಯ ಘಟಕಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
ನಾವು ವ್ಯವಸ್ಥಿತ ರೀತಿಯಲ್ಲಿ ಟಿಕೆಟ್ ನೀಡಲಿದ್ದೇವೆ’ ಎಂದು ತಿಳಿಸಿದ್ದಾರೆ. ಗುರುವಾರವಷ್ಟೆ ಪ್ರಕಟಿಸಲಾದ ರಾಜ್ಯ ಕಾಂಗ್ರೆಸ್ ಆಯ್ಕೆ ಸಮಿತಿ ಮುಖ್ಯಸ್ಥರ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಮಾನದಂಡಗಳ ಬಗ್ಗೆ ರಾಹುಲ್ ಚರ್ಚಿಸಿದರು.
ಅಪರಾಧ ಹಿನ್ನೆಲೆ ಇಲ್ಲದವರು, ಸರಿಯಾದ ರಾಜಕೀಯ ಅನುಭವ ಹೊಂದಿರುವವರು ಮತ್ತು ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ನೀಡಬೇಕು ಎಂದು ರಾಹುಲ್ ಹೇಳಿದ್ದಾರೆ.