ದುರಾಕ್ರಮಣ ನಿವಾರಣೆ ಖಚಿತ
ಶ್ರೀಕೃಷ್ಣಪುರಿ, ಜ. 5 - `ಭಾರತದ ಗಡಿಗಳನ್ನು ರಕ್ಷಿಸಲು ನೆಹರೂರವರು ತೀವ್ರ ಎಚ್ಚರದಿಂದಿದ್ದಾರೆಂಬುದಕ್ಕೆ ಗೋವಾದಲ್ಲಿ ಕೈಗೊಂಡ ಸತ್ವಪೂರ್ಣ ಹಾಗೂ ಸಕಾಲಿಕ ಕ್ರಮಗಳು ನಿದರ್ಶನಗಳಾಗಿವೆ.
ನಮ್ಮ ರಾಷ್ಟ್ರದ ಇತರ ಗಡಿಗಳಲ್ಲಿನ ದುರಾಕ್ರಮಣ ಹೊರದೂಡಲು ಅಂಥದೇ ನಿರ್ಣಯ ಹಾಗೂ ಸಂಕಲ್ಪ ಪ್ರದರ್ಶಿಸಲ್ಪಡುವುದೆಂಬುದು ಸಂಪೂರ್ಣ ಖಚಿತ~ ಎಂದು ಶ್ರೀ ಸಂಜೀವರೆಡ್ಡಿ ಇಂದು ಇಲ್ಲಿ ತಿಳಿಸಿದರು.
ಕಾಂಗ್ರೆಸ್ನಿಂದ ಐವರ ಉಚ್ಚಾಟನೆ
ಬೆಂಗಳೂರು, ಜ. 5 - ವಿಧಾನಸಭಾ ಸದಸ್ಯರಾದ ಶ್ರೀ ಎಸ್. ಕರಿಯಪ್ಪ ಹಾಗೂ ಶ್ರೀ ಎಂ. ಹನುಮಂತಯ್ಯ, ಚನ್ನಪಟ್ಟಣ ತಾಲ್ಲೂಕಿನ ಶ್ರೀ ಬಿ. ಸಿದ್ದೇಗೌಡ, ಬೆಂಗಳೂರು ನಗರದ ಶ್ರೀ ಎಂ. ಬುದ್ಧದಾಸ್ ಮತ್ತು ಮಳವಳ್ಳಿಯ ಶ್ರೀ ಕೆ. ವಿ. ವೀರಪ್ಪ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಹೊರಕ್ಕೆ ಹಾಕಿರುವುದಾಗಿ, ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯು ಇಂದು ಇಲ್ಲಿ ಪ್ರಕಟಿಸಿದೆ.