ಕುಶಾಲನಗರ: ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡುವ ಹಾಗೂ ಸಾರ್ವಜನಿಕರ ಆರೋಗ್ಯ ಸುಧಾರಣೆ ಉದ್ದೇಶದಿಂದ ಹೋಟೆಲ್ಗಳ ಮೇಲೆ ಶುಕ್ರವಾರ ದಾಳಿ ಮಾಡಿದ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ತಂಡವು ಅಶುಚಿತ್ವದಿಂದ ಕೂಡಿರುವ ಹೋಟೆಲ್ಗಳಿಗೆ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿತು.ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಚರಿತಾ ಪ್ರಕಾಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಪಟ್ಟಣದ ಹೋಟೆಲ್ಗಳಿಗೆ ಭೇಟಿ ನೀಡಿ ಅಡುಗೆ ಕೋಣೆ, ದಾಸ್ತಾನು ಕೊಠಡಿ, ನೀರು ಶೇಖರಣಾ ಟ್ಯಾಂಕಿನ ಶುಚಿತ್ವ, ಶೌಚಾಲಯದ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿತು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹೋಟೆಲ್ನಲ್ಲಿ ಅಶುಚಿತ್ವ ಹೊಂದಿದ್ದ ಹಿನ್ನೆಲೆಯಲ್ಲಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ ಅಧಿಕಾರಿಗಳು ಹೋಟೆಲ್ ಸುತ್ತ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿತು.ಪಟ್ಟಣದ ವಿವಿಧ ಹೋಟೆಲ್ಗಳಿಗೆ ಭೇಟಿ ನೀಡಿದ ಜಾಗೃತ ದಳವು ಅಶುಚಿತ್ವದಿಂದ ಕೂಡಿದ್ದ ಹೋಟೆಲ್ಗಳಿಗೆ ನೋಟಿಸ್ ನೀಡಿ ಮುಂದಿನ ದಿನಗಳಲ್ಲಿ ಶುಚಿತ್ವ ಕಾಪಡದೆ ಹೋದರೆ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿತು.
ಮಾರುಕಟ್ಟೆ ರಸ್ತೆಯಲ್ಲಿ ಪ್ಲಾಸ್ಟಿಕ್ ಮಾರಾಟ ನಿಷೇಧದ ನಡುವೆಯೂ ನಿಮಯ ಉಲ್ಲಂಘಿಸಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿ ಮತ್ತು ಸಂತೆ ವ್ಯಾಪಾರಿಗಳಿಗೂ ಜಾಗೃತ ದಳ ದಂಡ ವಿಧಿಸಿತು.ಪಟ್ಟಣದ ಎಲ್ಲ ಅಂಗಡಿ-ಮುಂಗಟ್ಟುಗಳಿಗೆ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಮಾಲೀಕರಿಗೆ ದಂಡ ವಿಧಿಸಲಾಯಿತು.
ಬೇಸಿಗೆ ಕಾಲ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಎಲ್ಲಾ ಹೋಟೆಲ್, ಬೇಕರಿ, ಕಲ್ಯಾಣ ಮಂಟಪ, ಬಾರ್ ಮತ್ತು ರೆಸ್ಟೋರೆಂಟ್ನ ಮಾಲೀಕರು ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಪ.ಪಂ.ಅಧ್ಯಕ್ಷೆ ಚರಿತಾ ಮನವಿ ಮಾಡಿದರು.ಪ.ಪಂ.ಉಪಾಧ್ಯಕ್ಷ ಎಚ್.ಜೆ.ಕರಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ಅಬ್ದುಲ್ ಖಾದರ್, ಮುಖ್ಯಾಧಿಕಾರಿ ಪದ್ಮನಾಭ, ಆರೋಗ್ಯ ನಿರೀಕ್ಷಕ ಎಂ.ಪಿ.ಮಹೇಶ್ಕುಮಾರ್, ಮೇಸ್ತ್ರಿ ಕುಮಾರ್, ಪೌರಕಾರ್ಮಿಕರಾದ ರಘು, ಗಣೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.