ಮದ್ದೂರು: ಸಮೀಪದ ಬೆಸಗರಹಳ್ಳಿ ಅಡ್ಡರಸ್ತೆ ಬಳಿ ಮಾಂಡವ್ಯ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಕೇಂದ್ರಕ್ಕೆ ಶಾಸಕಿ ಕಲ್ಪನ ಸಿದ್ದರಾಜು ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಂಡ್ಯ ನಗರದ ಮಾಂಡವ್ಯ ಎಜುಕೇಷನ್ ಟ್ರಸ್ಟ್ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಾರ್ವಜನಿಕ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದೆ. ಈ ಕೇಂದ್ರದಲ್ಲಿ ಅಳವಡಿಸಲಾಗಿರುವ ಸ್ವಯಂಚಾಲಿತ ಯಂತ್ರಕ್ಕೆ ಜನರು 5 ರೂಪಾಯಿ ನಾಣ್ಯ ಹಾಕಿದರೆ 20 ಲೀಟರ್ (ಒಂದು ಬಿಂದಿಗೆ) ಶುದ್ಧ ಕುಡಿಯುವ ನೀರು ದೊರಕಲಿದೆ. ತಾಲ್ಲೂಕಿನಾದ್ಯಂತ ಈಗಾಗಲೇ ಜನರು ಪ್ಲೋರೈಡ್ ಮಿಶ್ರಿತ ನೀರಿನ ಸೇವನೆಯಿಂದಾಗಿ ಹಲವು ಕಾಯಿಲೆಗಳು ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ನೀರಿನ ಘಟಕಗಳು ಇನ್ನು ಹೆಚ್ಚು ಸ್ಥಾಪಿತವಾಗಲಿ ಎಂದರು.
ಮಾಜಿ ಶಾಸಕ ಎಸ್.ಎಂ.ಶಂಕರ್ ಮಾತನಾಡಿದರು. ಮಾಂಡವ್ಯ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಟಸ್ಟ್ನ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಯೋಗಗುರು ಪುಟ್ಟಸ್ವಾಮಿ, ಪ್ರಾಂಶುಪಾಲರಾದ ಯದುಶೈಲ ಸಂಪತ್, ನಾಗರಿಕ ವೇದಿಕೆ ಅಧ್ಯಕ್ಷ ಕೆ.ಬಿ.ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಂದರ್ಶ, ಸಮಾಜಸೇವಕ ಮೂರ್ತಿ, ಸತ್ಯಪ್ಪ, ಆಡಳಿತಾಧಿಕಾರಿ ಕಬ್ಬನಹಳ್ಳಿ ಕೆ.ಶಂಭು ಪಾಲ್ಗೊಂಡಿದ್ದರು.