ಯಲಬುರ್ಗಾ: ವ್ಯಾಪಕ ಜಲಮಾಲಿನ್ಯದ ಪರಿಣಾಮದಿಂದ ಶುದ್ಧನೀರನ್ನು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ, ಹಾಗೆಯೇ ವಾಯುಮಾಲಿನ್ಯ ನಿಯಂತ್ರಿಸದಿದ್ದರೆ ಶುದ್ಧಗಾಳಿಯನ್ನು ಕೊಳ್ಳಬೇಕಾದ ಸ್ಥಿತಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಎಚ್. ಶಿರವಾಳಕರ್ ಕಳವಳ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ತಹಸೀಲ್ ಕಚೇರಿಯಲ್ಲಿ ಆಯೋಜಿಸಿದ್ದ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರ ನಾಶವೆಂದರೆ ಕೇವಲ ಮರಗಳ ನಾಶವಲ್ಲ ನೀರು, ಗಾಳಿ ಹಾಗೂ ಇನ್ನಿತರ ನೈಸರ್ಗಿಕ ಸಂಪತ್ತಿನಲ್ಲಿ ಉಂಟಾಗುವ ನಷ್ಟವು ಒಳಗೊಂಡಿದೆ.
ಇಂತಹ ನಷ್ಟ ಮನುಷ್ಯನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸ್ಥಳೀಯ ಸಂಸ್ಥೆಗಳು ಯಾವುದೇ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವ ಮೊದಲು ಕಡ್ಡಾಯವಾಗಿ ಸಸಿಗಳನ್ನು ನೆಡುವಂತೆ ಷರತ್ತು ವಿಧಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆಗೆ ಸಾಕಷ್ಟು ಯೋಜನೆಗಳು ಅನುಷ್ಠಾನದಲ್ಲಿದ್ದರೂ ಅದಕ್ಕೆ ಮತ್ತೊಂದು ಕಾಯ್ದೆ ಅಡ್ಡಬಂದು ನಿಯಂತ್ರಣದಲ್ಲಿ ಗೊಂದಲ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕಾಯ್ದೆ ಅನುಷ್ಠಾನಗೊಳ್ಳಬೇಕಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಈ.ಡಿ. ಭೃಂಗಿ ಹೇಳಿದರು.
ಸ್ವಾಸ್ತ್ಯ ಸಮಾಜ ನಿರ್ಮಾಣದಲ್ಲಿ ಆರೋಗ್ಯಕರ ವಾತಾವರಣ ಇರಬೇಕಾದುದು ಅಗತ್ಯವಿದೆ. ಅರಣ್ಯ ಇಲಾಖೆಯವರು ಪ್ರತಿಯೊಬ್ಬ ಲಕ್ಷಾಂತರ ಸಸಿಗಳನ್ನು ನೆಡುತ್ತಾರೆ. ಆದರೆ ನಿರೀಕ್ಷೆಯಂತೆ ಅವುಗಳ ಸಂರಕ್ಷಣೆಯಾಗುತ್ತಿಲ್ಲ, ಮುಖ್ಯವಾಗಿ ನೆಟ್ಟ ಸಸಿ ಬೆಳೆದು ದೊಡ್ಡದಾಗುವವರೆಗೂ ಅದ ಆರೈಕೆ ಮಾಡುವ ಕೆಲಸ ಆಗಬೇಕಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ ಭಜಂತ್ರಿ ಹೇಳಿದರು.
ಪರಿಸರ ಮಾಲಿನ ನಿಯಂತ್ರಣ ಕಾಯ್ದೆ ಕುರಿತು ವಕೀಲ ಪಿ.ಎಸ್. ಬೇಲೇರಿ ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ನಾನುಸಾದ ನಾಯಕ್ ಗ್ರಾಮೀಣ ಪ್ರದೇಶದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ತೋಟಗಾರಿಕೆ ಅಧಿಕಾರಿ ಮಹಾದೇವಪ್ಪ ಕಮ್ಮಾರ, ಅಪರ ಸರ್ಕಾರಿ ವಕೀಲ ಎಸ್.ಎಸ್. ಮಾದಿನೂರ. ಶ್ರೀಕಾಂತ ವೈದ್ಯ ಪ್ರಾರ್ಥಿಸಿದರು.
ಎಸ್.ಎನ್. ಶ್ಯಾಗೋಟಿ ಸ್ವಾಗತಿಸಿದರು. ರಾಜು ನಿಂಗೋಜಿ ನಿರೂಪಿಸಿದರು. ಐ.ಬಿ. ಕೋಳುರು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.