ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದ ಜನರಗೆ ಶುದ್ಧ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.ಅವರು ಈಚೆಗೆ ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರನ್ನೊದಗಿಸುವ ಘಟಕದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈಚೆಗೆ ಮಳೆ ಕೊರತೆಯಿಂದ ಎಲ್ಲೆಡೆಯೂ ಅಂತರ್ಜಲ ಆಳಕ್ಕಿಳಿದಿದ್ದು ಜನರು ಅನಿವಾರ್ಯವಾಗಿ ಫ್ಲೋರೈಡ್ಯಕ್ತ ನೀರನ್ನು ಬಳಸುವಂತಾಗಿದೆ. ಇದರಿಂದ ಹಲವು ರೋಗರುಜಿನಗಳು ಜನರನ್ನು ಕಾಡುತ್ತಿವೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಪಂಚಾಯಿತಿಯಿಂದ ಜಿಲ್ಲೆಯಲ್ಲಿಯೇ ಮೊದಲ ಬಾರಿ ಗ್ರಾಮೀಣರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೊಳ್ಳುತ್ತಿದೆ ಎಂದರು.
ಶುದ್ಧ ಕುಡಿಯುವ ನೀರು ಯೋಜನೆಗೆ ಗ್ರಾಮ ಪಂಚಾಯಿತಿಯಿಂದ ರೂ 2 ಲಕಷ ಹಾಗೂ ಶಾಸಕರ ನಿಧಿಯಿಂದ ರೂ 3 ಲಕ್ಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಪಂಚಾಯಿತಿ ಆವರಣದಲ್ಲಿ ಘಟಕ ಸ್ಥಾಪನೆಗೆ ಜಾಗ ನೀಡಲಾಗಿದೆ. ಇನ್ನು 3 ತಿಂಗಳಲ್ಲಿ ಘಟಕ ಸಿದ್ದಗೊಂಡು ಶುದ್ಧ ಕುಡಿಯುವ ನೀರನ್ನು ಅತ್ಯಂತ ಕಡಿಮೆ ದರದಲ್ಲಿ ವಿತರಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪಂಚಾಕ್ಷರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎಂ.ಜಗದೀಶ್, ಸದಸ್ಯ ರಮೇಶ್ಕುಮಾರ್, ಧರ್ಮಸ್ಥಳ ಸಂಸ್ಥೆಯ ಮೇಲ್ವಿಚಾರಕ ನಾಗರಾಜ್ ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಸಿದ್ದರಾಮಯ್ಯ ವಂದಿಸಿದರು.