ನರಗುಂದ: ಇತ್ತೀಚೆಗೆ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಅದನ್ನು ನಿವಾರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಹಾಲು ಅವಶ್ಯವಾಗಿದೆ. ಆದ್ದರಿಂದ ಸರಕಾರ ಜಾರಿಗೆ ತಂದ ಕ್ಷೀರ ಭಾಗ್ಯ ಯೋಜನೆ ಸದುಪಯೋಗವಾಗಬೇಕಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ. ಜೆ. ಶಂಕರಮೂರ್ತಿ ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ
ಪಟ್ಟಣದ ಸೋಮಾಪುರ ಓಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 3ರಲ್ಲಿ ಗುರುವಾರ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಸಮರ್ಥ ಭಾರತದ ನಿರ್ಮಾಣಕ್ಕೆ ಮಾನವ ಸಂಪನ್ಮೂಲ ಅವಶ್ಯವಾಗಿದೆ. ಆದ್ದರಿಂದ ಮುಂದಿನ ಬಲಿಷ್ಠ ಭಾರತದ ನಿರ್ಮಾಣಕ್ಕೆ ಇಂದಿನ ಮಕ್ಕಳಿಗೆ ಹಾಲು ವಿತರಿಸುವಂತಹ ಕ್ಷೀರ ಭಾಗ್ಯ ಯೋಜನೆ ಅತ್ಯುತ್ತಮವಾಗಿದೆ. ಅಂಗನವಾಡಿ ಮಕ್ಕಳಿಗೆ ಹಾಗೂ ಸರಕಾರಿ ಶಾಲೆ, ಅನುದಾನಿತ ಶಾಲೆ ಮಕ್ಕಳಿಗೆ ಹಾಲು ವಾರದಲ್ಲಿ ಮೂರು ದಿವಸ ವಿತರಿಸಲಾಗುವುದು. ಮೂರು ವರ್ಷದಳಗಿನ ಮಕ್ಕಳಿಗೆ ನೇರವಾಗಿ ಮನೆಗೆ ವಿತರಿಸಲಾಗುವುದು.
ಪ್ರಾಥಮಿಕ ಶಾಲೆ ಮಕ್ಕಳಿಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿತರಿಸಲಾಗುವುದು. ಆದ್ದರಿಂದ ಇದರ ಸದ್ಬಳಕೆ ಅವಶ್ಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಮಾತನಾಡಿ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡುವುದು ಅವಶ್ಯವಾಗಿದೆ ಎಂದರು.
ಎಸ್.ಎಂ.ಉಕ್ಕಲಿ, ಪುರಸಭೆ ಸದಸ್ಯ ದೇವರಡ್ಡಿ ವೆಂಕರಡ್ಡಿಯವರ, ಸಮನ್ವಯಾಧಿಕಾರಿ ಪಿ.ಎಫ್. ಸೊಲಾಪುರಿ, ಮುಖ್ಯ ಶಿಕ್ಷಕ ಪಾಟೀಲ, ರೇಣುಕಾ ಮಾಗಡಿ, ಚಿಕ್ಕಮಠ ಉಪಸ್ಥಿತರಿದ್ದರು. ರಚನಾ ಹಕಾಟೆ ಸ್ವಾಗತಿಸಿದರು. ಮಂಜುಳಾ ಗುಣಾರಿ ನಿರೂಪಿಸಿ, ವಂದಿಸಿದರು.