ತಿ.ನರಸೀಪುರ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಯೋಜನೆಯ ಪರಿಷ್ಕರಿಸಿದ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪಟ್ಟಣದ್ಲ್ಲಲಿ ಸೋಮವಾರ ಪ್ರತಿಭಟನೆ ಮಾಡಿದರು.
ರಾಜ್ಯ ಸರ್ಕಾರ ಬಿಸಿಎಂ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ರದ್ದು ಮಾಡಿ, ಪೂರ್ಣ ಪ್ರಮಾಣದ ಶುಲ್ಕ ಪಾವತಿಸುವಂತೆ ಆದೇಶಿಸಿದೆ. ಇದು ವಿದ್ಯಾರ್ಥಿ ವಿರೋಧಿ ನೀತಿ. ಈ ಹಿಂದೆ ಕಾಲೇಜುಗಳಿಗೆ ನೀಡುತ್ತಿದ್ದ ಶಿಷ್ಯವೇತನದಲ್ಲಿ ಶುಲ್ಕ ಭರಿಸಲಾಗುತ್ತಿತ್ತು. ಆದರೆ, ಪ್ರಸ್ತುತ ವಿದ್ಯಾರ್ಥಿಗಳೇ ಪೂರ್ಣ ಶುಲ್ಕ ಪಾವತಿಸುವಂತೆ ಸೂಚಿಸಿದೆ ಹಾಗೂ ಇದು ಬಡ ವಿದ್ಯಾರ್ಥಿಗಳಿಗೆ ಬಹಳ ಹೊರೆಯಾಗುತ್ತದೆ. ಬಜೆಟ್ ಲಭ್ಯತೆ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಹಣ ಮರು ಪಾವತಿ ಮಾಡುವ ಆದೇಶ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಹಿಂದಿನ ಪದ್ಧತಿಯಲ್ಲಿ ಶುಲ್ಕ ಪಡೆಯಬೇಕು. ಹೊಸ ಆದೇಶವನ್ನು ರದ್ದು ಮಾಡಿ ಶುಲ್ಕಕ್ಕಾಗಿ ಪೋಷಕರ ಮೇಲೆ ಒತ್ತಡ ಹೇರುವುದು ನಿಲ್ಲಬೇಕು ಎಂದು ಆಗ್ರಹಿಸಿ ನಂತರ ಮನವಿ ಪತ್ರವನ್ನು ತಾಲ್ಲೂಕು ತಹಶೀಲ್ದಾರ್ ಗೀತಾಕೃಷ್ಣ ಅವರಿಗೆ ನೀಡಿದರು.
ಎಬಿವಿಪಿಯ ಜಿಲ್ಲಾ ಸಂಚಾಲಕ ರಾಕೇಶ್, ಅನಿಲ್, ಅರ್ಜುನ್, ಮಹೇಶ್, ಮಂಜು, ಕನಕರಾಜು, ಶಾಂತರಾಜು, ಮಹೇಶ್, ಅಭಿಲಾಷ್, ಜಗದೀಶ್, ಮಣಿಕಂಠ, ಕೆ.ಬಿ.ಮಂಜು ಮತ್ತಿತರರು ಇದ್ದರು.