ಬೆಂಗಳೂರು (ಪಿಟಿಐ) : 'ರಾಜ್ಯ ಬಿಜೆಪಿ ಸರ್ಕಾರ ಒಬ್ಬ ಶಾಸಕನಿಂದ ಅಲ್ಪಮತ ಅನುಭವಿಸಿದೆ ಎಂಬುದು ತಿಳಿದಾಕ್ಷಣ ಬಹುಮತ ಸಾಬೀತು ಪಡಿಸಲು ಸರ್ಕಾರಕ್ಕೆ ಸೂಚನೆ ನೀಡುವೆ. 13 ಜನ ಶಾಸಕರು ರಾಜೀನಾಮೆ ನೀಡಿದ್ದರೂ ಸರ್ಕಾರ ಇನ್ನೂ ಬಹುಮತ ಕಳೆದುಕೊಂಡಿಲ್ಲ. ಹೀಗಾಗಿ ಸಂವಿಧಾನಬಾಹಿರವಾದ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ' ಎಂದು ಹೇಳುವ ಮೂಲಕ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಸದ್ಯ ಬಹುಮತ ಸಾಬೀತು ಪಡಿಸುವಂತೆ ಶೆಟ್ಟರ್ ಸರ್ಕಾರವನ್ನು ಕೇಳುವುದಿಲ್ಲ ಎಂಬ ಅಭಯವನ್ನು ಶನಿವಾರ ನೀಡಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಭಾರದ್ವಾಜ್, ಪ್ರಸ್ತುತ ಎಲ್ಲಾ ಬೆಳವಣಿಗೆಗಳನ್ನು ಅವಲೋಕಿಸುತ್ತಿದ್ದು, ಸದ್ಯ ಯಾವುದೇ ಸಂವಿಧಾನಬಾಹಿರ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರವನ್ನು ಬೀಳಿಸಲು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ನಡೆಸಿರುವ ಶತಾಯಗತ ಪ್ರಯತ್ನದ ಫಲವಾಗಿ 13 ಮಂದಿ ಶಾಸಕರು ರಾಜೀನಾಮೆ ನೀಡಿರುವುದರಿಂದ ಬಹುಮತದ ಕೊರತೆ ಎದುರಿಸಿ ವಿಧಾನಸಭೆ ಚುನಾವಣೆಗೂ ಮುನ್ನವೇ ಸರ್ಕಾರ ಪತನಗೊಳ್ಳುವ ಭೀತಿ ಎದುರಿಸುತ್ತಿದ್ದ ಶೆಟ್ಟರ್ ಸರ್ಕಾರ ರಾಜ್ಯಪಾಲರ ಈ ಪ್ರತಿಕ್ರಿಯೆಯಿಂದ ತುಸು ನಿರಾಳವಾಗಿದೆ.